Tuesday, December 27, 2011

ಚಂದ್ರ ಶಿಕಾರಿ .



ನಾನು ಚಂದಿರ ಮತ್ತೆ ಅವಳು
ಅವಳೆಂದರೆ ನನ್ನದೇ ನೆರಳು !!

ನಾನು ಕಿರಣಗಳನ್ನ ತಡೆಯುತ್ತೇನೆ
ಚೆಂದುಟಿ ಒಣಗದಂತೆ
ಅವಳು ಕಿರಣಗಳನ್ನ ಸೆಳೆಯುತ್ತಾಳೆ
ಚಂದಿರನೂ ಕರಗುವಂತೆ

ಇಂದಾದರೂ ಪೂರ್ಣ ಚಂದಿರನ
ಕಾಣಬೇಕೆಂಬ ಬಯಕೆ!
ಅವಳ ಮುಂಗುರುಳಿನಲ್ಲೇ ಸಿಲುಕಿ
ಚಂದಿರ ಒದ್ದಾಡುವನೇನೋ ?
೪.
ಎಲ್ಲರೂ ಅಂದರು ಚಂದಿರ
ಇದ್ದಾಗ ರಾತ್ರಿ ತಂಪೆಂದು.
ಹೆಮ್ಮೆ ನನ್ನಲ್ಲಿ ! ನನಗೆ
ಚಂದಿರ ಬೆಚ್ಚನೆಯ ಆಶ್ವಾಸ !

೨೭-೧೨-೨೦೧೧

Monday, December 26, 2011

ಬಿದಿರು


ಅಪ್ಪನೋಡಿದ ಆಕಾಶಕ್ಕೆ ಬಿಳೆದ ಬಿದಿರಿನ ಮಹಲು
ಕುಡುಗೋಲನ್ನಿಕ್ಕಿ ಒಂದೊಂದೇ ಎಳೆದ
ಅವಧಿ ಮೀರಿದ ದುಡಿತ, 
ಕೊನೆಗಾಯ್ತು ಬುಟ್ಟಿ ಮತ್ತೆ ನಿಚ್ಚಣಿಕೆ !
ಹೊಟ್ಟೆಗೆ ಹಿಟ್ಟಿನ ಪೂರಯಿಕೆ !


ಅಮ್ಮ ಅದೇ ಬಿದಿರ ಕೊಳವೆಯಿಂದ 
ಊದಿದಳು ಒಲೆಯ, ಬೆಂಕಿ ಬಿದಿರ ಪುಳ್ಳೆಗೆ!
ಏನೋ ಬೇಯುವುದು 
ಏನೋ ಸುಡುವುದು 
ಅಮ್ಮಂದಿರಿಂದ ಸಾಧ್ಯವೆಂದೇ , 
ಅಲ್ಲ. ಬಿದಿರ ಬಳಕೆ.


ಮಗ ಇನ್ನೊಂದು ಭಾವುಕ ಜೀವಿ
ತನ್ನಂತೆಯೇ ಉಸಿರಾಡುವ ಮರದ ಬುಡ ಕಡಿಯಲಾರ !
ಕೈ ಕಾಲು ಕತ್ತರಿಸಿದ,
ಮೋಹನ ಮುರಳಿಯ ವಯಸು ನೆನಪಿಸಿ
ತೂತು ಕೊರೆದ , ಕೊಳಲಂತೆ ಅದು !
ಮಂದಾನಿಲದ ನಡುವೆ ಬಿದಿರ ಶಬ್ದ ಈಗ.


ಮೊಮ್ಮಗನೂ ಅದೇ ಹಾದಿ, 
ಉಳಿದ ಬಿದಿರಿನ ಮೆಳೆಗೆ ಕಟ್ಟೆ ಕಟ್ಟಬೇಕಂತೆ!
ಪುಟ್ಟನಾಗಿರುವಷ್ಟು ಬಿದಿರು ಬೆಳೆದೀತು !

(ಪ್ರೇರಣೆ, ಹೃದಯ ಶಿವರವರು ಬಿದಿರು ಎಂದು ಒಂದು ಸಣ್ಣ ಕವನ ಬರೆದಿದ್ದರು .)

Friday, November 25, 2011

ನಾನು ಮತ್ತ ಅವಳು ಎತ್ತ?


ಬಾರೆ ಸಖಿ ಬಾರೆ ಸಖಿ ನೀನು ಬಾರೆ ಇಲ್ಲಿ
ತೇರಿಹುದು ಎದೆಯಲ್ಲಿ, ದೇವಿಯಿರದೂರಿನಲ್ಲಿ

ಮುಡಿದದ್ದು ಮಲ್ಲಿಗೆ ಮಾತೆಷ್ಟು ಕಡೆಯಲ್ಲಿ
ಪರಿಮಳವು ಹೋದ ಕಡೆ ಗಾಳಿಯಲ್ಲಿ
ಎನಿತು ಮುದವಿತ್ತು ಎಷ್ಟೊಂದು ಸೊಬಗಿತ್ತು
ನಲ್ಲೆ ನೀನಿರುವಾಗ ಬಾಳಿನಲ್ಲೆ

ತೋರಿ ನೀ ಚಂದ್ರಮ ನಾ ನೋಡಿ ನಿಂದಾಗ
ಕಂಡ ಚಂದಿರ ನಿನ್ನ ಕಂಗಳಲ್ಲಿ
ದೂರ ಸರಿದರು ಅವನ ಕಿರಣಗಳು ಮೀಟುವವು
ನಿನ್ನ ಮೋಹದ ನಗೆಯ ಬಿಗುವಿನಲ್ಲಿ

ಬಳಲಿಕೆಯೋ ಬಾಡುವುದೋ ಮತ್ತೆ ಅಳು ನೋವುಗಳೊ
ಸುಖದ ಸುದೀಪ್ತಿಗಳೊ ಈಗ ಇಲ್ಲಿ?
ಕಳೆಯುತಿದೆ ನೆನಪು ಎಳೆಯುವುದು ನಿನ್ನ ಬಳಿ
ಚಕಿತ ನಿನ್ನೀ ಬಗೆಯ ಮೋಡಿಯಲ್ಲಿ!

25-11-11

Tuesday, November 8, 2011

ಅವಳ ಕವನ

೧.
ನನಗಿರುವುದೆರಡೇ ಸ್ವತ್ತು
ಅವಳು ಮತ್ತವಳ ಮುತ್ತು !!
೨.
ಸರ್ವ ಜೀವಿಗೂ ನೀರೇ ಆಧಾರ !
ನನಗೋ ನೀರೆ ನಿನ್ನಧರ !
೩.
ಅವಳ ಚೆಂದುಟಿ ನೋಡಿ
ಕುಳಿತಿದ್ದೆ ನಾನು
ಹೀರಬಲ್ಲೆನೆ
ಕತ್ತಿಯಲಗಿನ ಜೇನು ?

Friday, October 28, 2011

ಸೌಗಂಧಿಕಾ ಪ್ರಸಂಗ .!


ಬಿರಿದ ಕಣ್ಣು ಸೆಳೆವ ಮೋಹದೂಟ!
ಬೆಚ್ಚಿಬಿದ್ದಳಾಕೆ ಭೀಮನ ನೋಟಕೆ
ಕದಿಯುವಾಸೆ ಅವನ ಸಂಗ
ಸೋತು ಗೆಲ್ಲಬಲ್ಲ ನಲ್ಲನವನು !

ಸೌಗಂಧಿಕಾ ! ಕಲ್ಪನೆಯೇ ? ಅಲ್ಲ
ಗಾಳಿಗೆಲ್ಲೋ ಹಾರಿ ಬಂದ ಹೂವು ಅದು
ಬಿಳಿ ಹಳದಿ ಗುಲಾಬಿ ಬಣ್ಣ
ಸೆಳೆದುದೇಕೆ ಕಣ್ಣ ಬಣ್ಣ ?

ನೋಡಿದೊಡನೆ ಸುಮದ ಚಂದ
ಒಡಲೊಳ್ ಹರಿದ ಪ್ರೇಮಗಂಧ
ಒಡನೆ ಬಳಿಗೆ ಬಂದ ಭೀಮ
ಸುಡುವ ಸತಿಯ ಬಯಕೆ ಏನು?

ಹೌದು ಭೀಮ ಹುಡುಕಿ ತಾ
ದುಶ್ಶಾಸನ ಹಿಡಿದೆಳೆದಿಹ
ಹೆರಳನೆಲ್ಲ ಮತ್ತೆ ಹೆಣೆದು
ಅಂಥ ಹೂವ ಮುಡಿಸಬೇಕು

ನಗುವ ಮಡದಿಗಿಂದು ಹೂವ
ಬಿಗಿದು ಅಪ್ಪಿ ಮುಡಿಸುವಾಸೆ ಅವಗೆ !
ಜಗದ ಚೆಲುವೆಯವಳು
ಮುಗುದ ಭೀಮ ಸೇನ ಇವನು !

ಗಂಧಮಾದನ ಪರ್ವತವೋ
ಸುಂದರಾಂಗಿಯರ ಕೊಳವೋ
ಬೆಂದು ಬೇಯುತಿದ್ದ ಭೀಮನೆದೆಗೆ
ಮುಂದೆ ಒಂದು ಸರೋವರ !

ದೂರದಿಂದ ಭೀಮ ಕಂಡ
ಮಾರ ಎಸೆದ ಹೂವ ಬಾಣ
ಕರುಬುತಿತ್ತು ಯಕ್ಷ ಬಳಗ
ಸಿರಿಯೇನ್ ದ್ರೌಪದಿಯದು ?

ತಲೆಯ ತುರುಬುಗಟ್ಟಿ ಹೂವ ಮುಡಿಸುವ
ಕಲೆಯ ಎಲ್ಲಿ ಕಲಿತ ಕಲಿಭೀಮ ?        
ಒಲ್ಲೆ ಎಂದಳೇನೆ ಅವಳು
ಸುಳ್ಳೆ ಮುನಿದಳು !

ಹೂವ ನೆಪದಿ ಭೀಮನ  ತೆಕ್ಕೆಯೊಳು ಬಂಧಿ
ನೋವಿತ್ತೆ ಮೊದಲು ! ಈಗಿಲ್ಲ ಮನದಿ !

೨೮-೧೦-೨೦೧೧

Thursday, October 6, 2011

ಸೂತ ಸಂವಾದ .


ಮಗನೆ,
ಬಿಲ್ಲು ಕಲಿಯುವ ಚಟವೋ
ಏನದು ದೊಡ್ಡ ಮಾಟ,
ಅಲ್ಲಿ ಬ್ರಾಹ್ಮಣರು ಹೇಳಿಕೊಟ್ಟದ್ದಕ್ಕೆ !
ಭೂಭುಜರು ಮಾರಾಮಾರಿ ಕಾದಿ
ಕಾರಿದ ನೆತ್ತರೆ ಸಾಕ್ಷಿ.

ಹೌದು ಮಗೂ.
ಬ್ರಾಹ್ಮಣರು ಹೇಳಿಕೊಡಬಹುದಂತೆ !
ಉಪಯೋಗಿಸುವಂತಿಲ್ಲ,
ಹಾಗೇ ಕ್ಷತ್ರಿಯರೂ !
ಬಳಸಬಹುದು ! ಭೋಧನೆ ನಿಶಿದ್ಧ.

ಕೇಳು,
ನಾನಂತೂ ಸೂತ ಮಗು!
ಅಪ್ಪ ಬ್ರಾಹ್ಮಣನೋ ಕ್ಷತ್ರಿಯನೋ ?
ಬಿಲ್ಲೋಜರ ನಡುವೆ ರಥ ಓಡಿಸುವುದು
ಬಿಲ್ಲುವಿದ್ಯೆಗಿಂತ ಗೆಲ್ಲುವ ವಿದ್ಯೆ!

ನಿನ್ನಬ್ಬೆ ಯಾರು ಮಗು ?
ಗಂಗೆಯೇ , ಅಲ್ಲ ಮಬ್ಬುಕತ್ತಲಿನಾಟಕ್ಕೆ
ಹೊಕ್ಕಳ ಬಳ್ಳಿ ಕತ್ತರಿಸಿದ ಮತ್ತೊಬ್ಬಳಿಹಳೇ.?

ನಿನ್ನ ಯೋಗಕ್ಕೆ, ಒಬ್ಬ!
ಬೆನ್ನುತಗ್ಗಿರುವ ಪರಶುರಾಮನಿದ್ದಾನೆ .
ಕಲಿಕೆ ನಿನ್ನ ಪ್ರಾಣ ....
.....ತೆಗೆಯದಿರಲಿ !

೦೭-೧೦-೧೧

Monday, September 26, 2011

ಏಳೆನ್ನ ನಲ್ಲೆ.


ಇಬ್ಬನಿಯ ಕಣ್ಣಲ್ಲಿ ನಿನ್ನ ನೋಡಿದ ನೆನಪು
ಮಬ್ಬಾದ ನಿನ್ನ ತುಟಿ ಬೆಳಗಿನಲ್ಲೆ
ತಬ್ಬಿದಾ ಚಂದಿರನ ಕುರುಹು ಹೆರಳಿನೊಳಿರಲು
ತಬ್ಬಿಬ್ಬುಗೊಂಡಿರುವೆ ಏಳು ನಲ್ಲೆ ......

ಹಕ್ಕಿಗಳ ಇಂಚರವು ನಿನ್ನ ಪಿಸುಮಾತಿನೊಳು
ಮಿಕ್ಕ ಪ್ರಣಯದ ಕಥೆಯ ಹೇಳಿದಂತೆ
ಪಕ್ಕದಲೆ ಬಿದ್ದಿರುವ ಚೆಂಗುಲಾಬಿಯ ಎಸಳು
ಸಿಕ್ಕಿಹುದು ಎನಗೀಗ , ಏಳು ನಲ್ಲೆ...

ಮಲ್ಲಿಗೆಯೊ ಸಂಪಿಗೆಯೊ ಮತ್ತೆ ಕೆಂದಾವರೆಯೊ
ಎಲ್ಲ ಮಾಯವೆ ,ಗೆಳತಿ ನಗುವಿನಲ್ಲೆ
ನಿಲ್ಲುವುದು ಹೃದಯದಲಿ ನಿನ್ನ ಪ್ರೇಮದ ಗೆರೆಯು
ನಲ್ಲೆ ನನ್ನನು ನೋಡೆ, ಏಳು ನಲ್ಲೆ !

26.09,2011

Wednesday, September 21, 2011

ಏನೋ ಬೇಕಾಗಿದೆ !

ಏನೋ ಬೇರೆ ಬೇಕಾಗಿದೆ !
ಎಂಜಲು ಹಾರಿದ್ದಕ್ಕೆಲ್ಲ
ಧ್ಯಾನಿಸಿ ಅನುಭವಿಸಿದ
ಗಾಯನ ಎನ್ನದಿರಿ !

ಕಲ್ಲಿಗೆ ಕಲ್ಲು ತಿಕ್ಕಿದರೂ ಬೆಂಕಿ ಸಿದ್ದ !
ಆದರೂ
ದಾರಿ ಸವೆಸಲಾರದ
ಕತ್ತಲ ಸೆರೆ ಒಡೆಯಲಾಗದ
ಮಿಣುಕು ಹುಳುವಿನಂತೆ !!
ಮಿಂಚೆಂದೊದರದಿರಿ !
ದೀಪವೂ ಅಲ್ಲವದು.
ಸುಮ್ಮನೆ ಹಾರಿದ ಕಿಡಿಗೆ ಬದುಕು ಅಷ್ಟೆ !

ಎರೆಹುಳು ಹೋದರೆ ಎರೆ ಅನ್ನಿ ! ಸಾಕು
ಬೊಬ್ಬಿಟ್ಟು ಕೂಗದಿರಿ ಹೆಬ್ಬಾವು ಎಂದು !
ನಿಮಗೆ ಹಾಗನಿಸಿದರೆ ಅದು
ನಿಮ್ಮ ದೃಷ್ಟಿದೋಷ !!

೨೨-೦೯-೨೦೧೧

Wednesday, September 14, 2011

ಸೂರ್ಯ ಶಿಕಾರಿ .

೧.
ಸೂರ್ಯನನ್ನು ನೋಡಬೇಕೇ ?
ಮುಖವನ್ನು ಕೈಯಿಂದ ಮುಚ್ಚಿ
ಸಣ್ಣ ತೂತುಗಳಿಂದ ಬೆಳಕಿನ ನಿಚ್ಚಳಿಕೆಯನ್ನೇರಿ
ಬೆಚ್ಚಿ ನೋಡಬೇಕು,
೨.
ಹಾಂ! ಕನ್ನಡಿ ತೆಗೆದು
ನಿನ್ನ ಬಿಂಬವನ್ನಲ್ಲದೆ ಸೂರ್ಯನನ್ನೂ ನೋಡು
ನೀ ಸೂರ್ಯನಿಗೆ ಕನ್ನಡಿ ಹಿಡಿ
ನಿನ್ನ ಮುಖಕ್ಕೆ ಬೆಳಕು !!
೩.
ನೀ ನೋಡು ಅವನನ್ನು ಅವ ನೋಡದಂತೆ
ಹಿಡಿದಿಡು, ಬಚ್ಚಿಡು ಮಳೆಮೋಡದಂತೆ !

೧೪.೦೯.೨೦೧೧

Saturday, September 10, 2011

"ಚೋಳ ಕಡಿತ"

ಹೀರಿ ಸಸ್ಯದ ಕಾಂಡ, ಕಚ್ಚಿ ಮಾಂಸದ ಖಂಡ
ತುಂಬಿದಾ ಉದರ ಭಾರಕೆ ಹೆದರಿ,
ಜಗದ ಚಾದರದೊಳಗೆ
ಮೌನ ನಿದ್ದೆಯ ಬಯಸಿ ಮೆಲ್ಲ ಜಾರಿದರೆ - ಕಡಿದಿತ್ತು ಚೇಳು

ಬೆಂಕಿ ಆರಿಸೊ ನೆಪದಿ ನೀರಿನಾ ಸೆರಗಿಂದ
ಶಂಕೆಯೋ ಅಂಕೆಯೋ ಇಲ್ಲದೆಯೆ,
ಬಿಂಕದಾ ಬೆಂಕಿಯನು
ಮೈಮೇಲೆ ಎಳೆದೆಳೆವ ಹುರುಪಿತ್ತು - ಮತ್ತೆ ಕಡಿದಿತ್ತು ಚೇಳು

ಮೆಚ್ಚಿತ್ತು, ಬೆಚ್ಚಿತ್ತು , ಸಿಕ್ಕಿತ್ತು ಕಾಳು
ಮತ್ತೆ ತಂಪಾಗೆಂದು ತುಟಿ ಬಯಸಿತ್ತು ಹಾಲು
ಕಾಮಹೋಮದ ಬೆಂಕಿ ಕಟ್ಟಿತ್ತು ಸಾಲು
ಎಲ್ಲ ಸೋಲಿಸಿ, ಗೆದ್ದಿತ್ತು ಸಂಸ್ಕಾರ ಚೇಳು !!

೧೭-೦೮-೨೦೧೧

Tuesday, August 30, 2011

ಓ ಕವಿಯೇ..


ಓ ಕವಿಯೆ, ಪ್ರಕೃತಿ ಪ್ರೇಮಿಯೆ ನೋಡು
ನೀರಿಲ್ಲಿ ಹರಿಯುವುದೆ ಹಾಲಿನಂತೆ ?
ನಿಲ್ಲಿಸು ನಿನ್ನ ಅರಚಾಟ ಕಿರುಚಾಟ
ನೀರೆ ಇರದಿರೆ ಏಕೆ ಹಾಲ ಚಿಂತೆ ?

ನಿನ್ನ ಆಭಾಸಕ್ಕೆಲ್ಲ ಉತ್ತರಿಸುವುದ್ಯಾರು
ಹಾಲು ನೀ ಹುಡುಕು ನನಗೆ ಬೇಡವಿಲ್ಲಿ !
ಮುನಿದು ಮೈಯ್ಯನು ಮುಚ್ಚುವಾಟವು ಬೇಡ
ಎಳೆಯುವುದು ನಿನ್ನ ಕೈ ಸೆರಗನಿಲ್ಲಿ

ಮೂಕವದು ಭಾವಗಳು ಎಂದೆಲ್ಲ ಒದರದಿರು
ಭಕ್ತಿ ಪ್ರೀತಿಗಳೆಲ್ಲ ನಿನ್ನ ಒಳಗೆ !
ನಿನಗೆ ನೆಪ ಬೇಕೆಂದು ಬರೆವ ತೆವಲು ಇದಲ್ಲ
ಕಣ್ಣೀರು ಕರಗುವುದೆ ಜೇನಿನೊಳಗೆ ?

ಬತ್ತಲಲಿ ಕತ್ತಲಲಿ ಬರಿಯ ಬಟ್ಟಲಲೆಲ್ಲಾ
ನೀ ಬರೆವ ಘನತರದ ಕಾವ್ಯ ಕವನ !
ಇದರ ಮೇಲೊಂದಿಷ್ಟು ಕಸವೊ ಬೆಂಕಿಯೊ ಹಾಕಿ
ಮತ್ತೆ ತೋರುವುದೇನು ನಿನ್ನ ಜತನ ?

ಸಾಕು ಕವಿ , ನೀನೆ ಗುರು ! ದೈವ ನಮಗೆ
ಬರೆಯದಿದ್ದರು ಕೊಡಿಸು ಸ್ವಲ್ಪ ಬೆಲ್ಲ!
ಮತ್ತೆ ಕೊಪ್ಪರಿಗೆ ಚಿನ್ನ ನಾನು ಕೇಳುವುದಿಲ್ಲ
ಉತ್ತರಿಸು ಪ್ರಶ್ನೆಗಳ ಬರಿಯ ಕನಸು ಅಲ್ಲ !

೩೦-೦೮-೨೦೧೧

Saturday, August 27, 2011

ಬೆಳಗು.


ಹಸಿಬಿಸಿಯಿರೆ ವಸುಮತಿಯಧರವ ಚುಂಬಿಸಿದನು ಭಾನು
ಹುಸಿಕೋಪದ ಬಿರುಮಾತುಗಳಿರೆ ಮರು ಹಾಡಿದನವನು
ಮುಸಿಮುಸಿಯೆನೆ ನಗುತಿರ್ದನು ಕಳೆದಾ ಚಂದಿರನು
ನಸುನಾಚಿಕೆಯಲಿ ಸುಖಸೌಖ್ಯದಿ ರಂಗೇರಿದೆ ಬಾನು.

ಕಂಬನಿಯನು ಛೇಡಿಸುತಿದೆ ಮೊಗದಾ ರವಿಯರಳು
ಬೆಂಬಲದಲಿ ನಿಂತಿಹುದದು ಮಲ್ಲಿಗೆ ಮೊಗ್ಗರಳು
ಹಿಂಬಾಲಿಸಿ ಭೂಮಿಯ, ಸವರಿ ಮತ್ತೆ ಹೆರಳು
ಬೆಂಬಿಡದಹ ಕಿರಣವದು ಸೂರ್ಯನ ಕೈ ಬೆರಳು

ಲೀಲೆಯಹುದೆ? ಇದು ಪ್ರೇಮವೆ? ಅಲ್ಲ ಬೆಳಗಿನಾಟವೋ
ಮೇಲೆ ಮುತ್ತು ರತ್ನವಿಟ್ಟು ಸೆಳೆವ ಪ್ರಕೃತಿ ಬೇಟವೊ
ಜಾಲದೊಳಗೆ ಬಂಧಿಸಿರುವ ಜಗದ ಸೊಬಗಿನೋಟವೊ
ಕಾಲದೊಳಗೆ ಹೊಂದುವಂತ ನಮಗೆ ನಿತ್ಯ ಪಾಠವೋ

೨೫.೦೮.೨೦೧೧

Wednesday, August 24, 2011

ಹೋಟೆಲಿನ ಒಳಗೆ .


ಇವತ್ತು ಬರೆಯಲೇ ಬೇಕೆಂದು ಕವನ
ಹುಡುಕಿದ್ದೆ ಶಬ್ಧಗಳ, ಮತ್ತೆ ಪಾರ್ಕುಗಳ
ಸುಸ್ತಾಗಿ ಮರಕೊರಗಿ ಚಿಂತಿಸುತಲಿದ್ದೆ
ಹಸಿವಾಗಿ ಮನದೊಳಗೆ ಹೋಟೆಲಿನ ಸದ್ದು !

ಬಿಸಿ ಇಡ್ಲಿ ಪೂರಿಯದು ಎಂತಹಾ ಸ್ವಾದ
ನೆನಪಾಯ್ತು ಅಮ್ಮನದು ಪ್ರೀತಿ ಅಗಾಧ
ಮನೆಯಲ್ಲೆ ಕಣ್ಮುಚ್ಚಿ ತಿಂದಂತೆ ಕುಡಿದಂತೆ
ಎಲ್ಲೋ ಕಳೆದೋಗಿದ್ದೆ ರುಚಿಯ ಉನ್ಮಾದಕ್ಕೆ

ಇಂತ ಪ್ರೀತಿಯ ಇಲ್ಲಿ ಇಟ್ಟವರು ಯಾರು
ಅಬ್ಬ ಮನೆಯಂತೆಯೇ ಹೋಟೆಲಿನ ಸೂರು
ಯಾರು ಬೀಳಿಸಿದರಿಲ್ಲಿ ಪಾತ್ರೆಗಳ ?ಸದ್ದು
ತಂದಿತ್ತು ರಸಭಂಗ, ತಿರುಗೆ ಏನಾಯ್ತು ಎಂದು !

ಹೋಟೆಲಿನ ಕೆಲಸದವ ಬೀಳಿಸಿದ್ದೇನು ?
ಪಿಂಗಾಣಿ ಪಾತ್ರೆಗಳು , ಬೆಚ್ಚಿತ್ತು ಕಣ್ಣು
ಬಲುಕೋಪಿ ಒಡೆಯನವ ಗದರಲಿಲ್ಲವನ
ಒಡೆದಿತ್ತು ತುಟಿಯಂಚು, ಮುದುಡಿತ್ತು ವದನ !

ಅಯ್ಯೊ ಎಲ್ಲವು ಹೀಗೆ ಎಲ್ಲಕಡೆಯಂತೆ
ಪ್ರೀತಿ ಹಾಡಿನ ಹಿಂದೆ ನೋವುಗಳ ಸಂತೆ
ಹೋಟೆಲಿನ ರೂಮಿನೊಳು ಹುಟ್ಟಿತ್ತು ಗೀತೆ
ಮತ್ತೆ ಅಲ್ಲಿಯೆ ಉಸಿರುಗಟ್ಟಿತ್ತು! ಸತ್ತೆ !!

೨೪-೦೮-೨೦೧೧

Monday, August 15, 2011

ವಿಷ ಯಾನ !!


ಹುಟ್ಟು ನಾ ಬಯಸಲಿಲ್ಲ
ಸಾವು ನಾ ಕಾಣಲಿಲ್ಲ
ನಡುವೆ ನೋವಿನೆಳೆಗಳಿಂದ ಇಳಿದ ಮೌನ

ಬೆಂಕಿಯೆದುರು ರೆಕ್ಕೆ ಸುಟ್ಟೆ
ಮಳೆಯ ಎದುರು ಕೊಚ್ಚಿ ಹೋದೆ
ಬೆಳೆಸಿ ಬೇಯಲಿಲ್ಲ ಬಿತ್ತದ ಗಾನ

ಪಡೆಯಲಾರೆ ಮೇಲೆ ಹೂವ
ಬಯಸಲಾರೆ ನೆಲದ ನೋವ
ಮಧ್ಯ ಸಿಲುಕಿ ಸುಮ್ಮಗುರಿವ ಯಾನ

ಚಿತ್ತದೊಳಗೆ ನೂರು ಭೀತಿ
ಭೀತಿಯೆನಿತೊ ಅಷ್ಟೆ ಪ್ರೀತಿ
ಸುಂದರತೆಯ ಭಾವವಿಲ್ಲಿ ವಿಷ ಯಾನ !!

೧೨-೦೮-೨೦೧೧

ಸೊಳ್ಳೆ ತತ್ವ !!!


ಸುಗ್ರಾಸ ಭೋಜನ,
ತಂಪಿದ್ದ ಉದರ, ಕಂಪಿನ ಕೋಣೆಯದು
ಮತ್ತೆ ಮೆಲ್ಲನೆ ಮೆತ್ತೆ, ಬಳಿಯಿತ್ತು ಕವನ
ಬೆಚ್ಚಿದ್ದೆ ಅದರೊಳಗೆ ಇರುವ ಹೂರಣ ಕಂಡು
ಎಲ್ಲೊ ಕಳೆದೋದಂತೆ ,
ತಲೆತಿರುಗಿ, ಕಣ್ ಮುಚ್ಚಿ ತಲ್ಲೀನನಾದೆ!
ಸತ್ಯದರ್ಶನವಾಯ್ತು, ತಿರುಗಿ ಎದ್ದೆ

ರಸಭಂಗ ಏಕಾಯ್ತು
ಹುಚ್ಚಿತ್ತು ಶಾಂತಿಯದು, ವಿಶ್ವಪ್ರೇಮದ ಒಲವು
ಮತ್ತೇನೋ ಮತ್ತೇರಿಸುವ ಒಳ್ಳೆ ಬದುಕಿನ ಕನಸು.
ಇಷ್ಟೆಲ್ಲ ಅಧ್ಯಯನ, ಮತ್ತೆ ಒಳ್ಳೆಯ ಚಿಂತೆ!
ತಿಳಿದೀತೆ ಸೊಳ್ಳೆಗದು ಕಚ್ಚಿತ್ತು ಮತ್ತೆ !

ಸತ್ಯದನ್ವೇಷ ಉನ್ಮಾದ ಎಲ್ಲ ನೆನೆಸುವ ಮುನ್ನ
ಹೊಡೆದ ಪೆಟ್ಟಿಗೆ,
ಸೊಳ್ಳೆ ಸತ್ತಿತ್ತು, ಹೀರಿದ ನೆತ್ತರ ಕಕ್ಕಿ..
ಕವನ ಮಡಿಚಿಟ್ಟೆ, ಚಾದರದೊಳಗೆ ನಾನೆ ಬಂದಿ

10-08-2011

ಕೆಂಪು ಮೇಫ್ಲವರು


ಕೆಂಪು ಮೇಫ್ಲವರು ಈ ಮರದ ಹೆಸರು
ಈ ಮನೆಯ ಎದುರಿತ್ತು ಬಿಗಿಯಿತ್ತು ಬೇರು !

ಮನೆಯೊಡತಿ ಬಲುಜಾಣೆ ಹೆಸರೇನೊ ಕಾಣೆ
ನೀರೆಯದಿದ್ದರೂ , ಪಾತ್ರೆ ತೊಳೆದವಳು ತಾನೆ

ನೆತ್ತರಿನ ಕೆಂಪು ಅದು ಗೊಂಚಲಿನ ಹೂವು
ಮೇ ತಿಂಗಳಲಿ ಮರವು ಮರೆಸುವುದು ನೋವು

ಮನೆಯ ಮಾಡನು ನೋಡೆ ಹುಳು ಹಿಡಿದ ಸಂತೆ
ಹೆಂಚಿನ್ನೂ ತರುಣ, ಮರದವುಗಳು ಮದುಕನಂತೆ

ಈ ಸಂಜೆ ಮನೆಯಾಕೆ ಮರದ ಬಳಿ ಬಂದು
ಇನ್ನೆರಡೆ ತಿಂಗಳಿವೆ, ಹೂಗಳನೆ ನೆನೆದು

ಬಂದಿದ್ದ ಸಂತಸದಿ ಆ ದಿನದಿ ಗಂಡ
ಮರನೋಡಿ ನಸುನಕ್ಕ ಬಲಿತಿತ್ತು ಕಾಂಡ

ಮರುದಿನವೆ ಕರೆತಂದ ಮರಕಡಿವ ಮಂದಿ
ಮರದ ತೋಳುಗಳೆಲ್ಲ ಬಡಗಿಯೊಳು ಬಂದಿ

ಈಗಿಲ್ಲ ಮರದಚ್ಚು ಆ ಮನೆಯ ಪರಿಸರದಿ
ಬಾಗಿಲೊಳು ಮರದ ಹೂ ನಗುತಿಹುದು ಮುದದಿ !

೦೮.೦೮.೨೦೧೧

ಅವನು- ಇವನು


---ಅವನು----
ಹೂ ಬಿಟ್ಟ ಗಿಡವನ್ನು
ಅವ ನೋಡುತಿದ್ದ
ಹುಟ್ಟಿಸಿದ ದೇವರನು
ಪುನಃ ಬೇಡುತಿದ್ದ
ಬೇಲಿಯಿಂದಾಚೆಗೇ ಮುಖ ಮಾಡಿ ನಿಂತಿರುವ
ಗುಲಾಬಿ ನೀನೆಂದು
ಬಹು ಇಷ್ಟಪಟ್ಟಿದ್ದ

---ಇವನು---
ಎಷ್ಟು ಗೊಬ್ಬರವಿದಕೆ?
ಇನ್ನೆಷ್ಟು ನೀರು
ಬಿಟ್ಟದ್ದು ಒಂದು ಹೂ
ಎಷ್ಟಿಹುದು ಮುಳ್ಳು
ಇದರ ಬೆಲೆ ಬಹು ಕಡಿಮೆ, ಮಲ್ಲಿಗೆಯೆ ಒಳ್ಳೆಯದು
ಕಿತ್ತ ಗಿಡವನು ಇವನು
ಬಹು ಕಷ್ಟಪಟ್ಟಿದ್ದ.

೦೮-೦೮-೨೦೧೧

ಬರೆಯುತ್ತೇನೆಂದರೆ ಬರೆ ಎಳೆದಂತಲ್ಲವೇ .?


ಕಾದು ನಿಗಿ ನಿಗಿ ಕೆಂಡದ ಮಧ್ಯೆ
ಬೂದಿ ಮುಚ್ಚಿಸಿಕೊಂಡು
ಮತ್ತೆ ಊದುವ ಹಿತವಾದ ಗಾಳಿಗೆ ಮೈತೆರೆದು
ಪುನಃ ಬೆಚ್ಚಗಾಗುವ ಕಬ್ಬಿಣ

ಬೆಚ್ಚಗಾಗುಗುವುದೇನು ಮಹಾ ?
ಕೈಗೆ ಕೈ ಒರಸೆ ಬಿಸಿಯೆಂಬರೆ ಅದನು
ಒಲೆಯ ಒಳಗಡೆ ಬಿದ್ದು
ಬೆಂಕಿಯಾಟದಿ ನೊಂದು
ಕಾಯಬೇಕು!

ಮತ್ತೆ ಮೈ ತಾಕಿದರೆ,
ಚರ್ಮ ಉರಿದೇಳಲಿ
ಬೊಬ್ಬೆ ಕಣ್ಣೀರ್ ಬರಲಿ
ಸುಟ್ಟು ಸುಡಬೇಕೆಲ್ಲ , ಬೆಂಕಿಯಂತೆ

ಬರೆ ಎಳೆಯುವುದು
ಒಳ್ಳೆಯದಾಗಲಿ ಎಂದು
ಅದು ಬಿಟ್ಟು ಬರಿಯ ಸಿಟ್ಟೇನು ಇಲ್ಲ
ಹಾಗೆಯೇ, ಬರೆಯುತ್ತೇನೆಂದರೆ ಬರೆ ಎಳೆದಂತೆ ಅಲ್ಲವೇ ?

೦೬.೦೮.೨೦೧೧

ನನ್ನ ಬೆಂಕಿ ಸುಡಲಿಲ್ಲ



ಹಚ್ಚುತ್ತಿದ್ದೆ ಸಣ್ಣ ಕಾಗದ ಚೂರ
ಕೈ ಮೇಲೆ ಬಿದ್ದಾಗ ಉರಿಯಬಹುದೋ ಎಂದು
ಹೆದರಿಕೆ ಇದ್ದರೂ ಹಚ್ಚಿದೆ,
ಬಿದ್ದರೂ ಸುಡದೇ ಇದ್ದದ್ದಕ್ಕೆ ಬೆಚ್ಚಿದೆ.

ಅದೆ ಆಶ್ಛರ್ಯ,
ಬೆಳ್ಳಂಬೆಳಗೆ ನಡೆಯುವಾಗ
ನಡುಬಳುಕಿಸಿ, ಕೆಣಕಿ ನಡೆದ
ಮೋಹಗಾತಿ ಚೆಲುವೆಯನ್ನ ಕಂಡಾಗ
ಕಣ್ ಸುಟ್ಟಿತ್ತು,

ನಡುವೆಯೆಲ್ಲೋ ತಿರುಗುವಾಗ
ನಗೆಯ ನಡುವೆ ಹೊರಳಿದಂತ
ಅವಳ ಮಾತು ಮನವ ಸುಟ್ಟಿತ್ತು.

ಸೋಕಿದರೂ ಸೋಕದಂತೆ
ತಾಕಿದ ಮೈಬಿಸಿಯುಸಿರಿಗೆ
ಅವಳ ಕಾವು ಹೆಚ್ಚು ಎಂದು
ದೇಹ ಸುಟ್ಟಿತ್ತು,
ಬೂದಿಯಾಗೊ ಆಸೆ ಹುಟ್ಟಿತ್ತು.

೦೫-೦೮-೨೦೧೧

Monday, August 8, 2011

ಬಾಲಿಶ ಕವನಗಳು - ಎರಡು ಜಡೆ ...


ನಿನ್ನೆ ವರೆಗೆ ಈ ಹುಡುಗಿ
ಎರಡು ಜಡೆಯ ಪುಟ್ಟ ಬೆಡಗಿ
ಕಣ್ಣ ತುಂಬ ಹಗಲುಗನಸು
ತುಂಬಿ ನಿಂತ ಬಾಲಿಕೆ
ಇಂದು ಏಕೋ ನಾಚಿಕೆ


ಎರಡು ಜಡೆಗು ಹೂವ ಮುಡಿದು
ಹತ್ತು ಮೊಗದಿ ನಕ್ಕು ನಲಿದು
ಮೀರಿ ಬರುವ ಕೋಪದಿಂದ 
ತುಂಟತನದ ಬೈಗಳು
ಹೊಡೆವ ಪುಟ್ಟ ಕೈಗಳು


ಗಾಳಿಗೊಂದು ಮಾತುಕಟ್ಟಿ
ಮಾತಿಗೊಂದು ಹಾಡು ಕಟ್ಟಿ
ಸೋತು ಗೆಲುವ ಅವಳ ದನಿಗೆ
ಎಲ್ಲ ನುಡಿಯು ಚಂದವೇ
ಸೆಳೆವ ರಾಗ ಗಂಧವೇ


ನಿನ್ನೆ ಎನಿತೋ ಅಂದವಿತ್ತು
ಮಾಧುರ್ಯದ ಗಂಧವಿತ್ತು
ಇಂದು ಏಕೋ ನನ್ನೆದೆಯಲಿ 
ಚಿಂತೆ ತುಂಬಿ ಬಳಲಿದೆ
ಅವಳ ದಾರಿ ಕಾದಿದೆ


ಬಂದ ಸ್ನೇಹಕೆಂತ ಅಂತ್ಯ
ಬದಲಾವಣೆ ಎಂತ ಸತ್ಯ
ಎಲ್ಲಿ ಹುಡುಕಿ ಹೋಗಲಿ ನಾ
ನೀನು ಕೊಟ್ಟ ಸ್ನೇಹವ
ನಿನ್ನಂತ ಪ್ರೀತಿ ಜೀವವ ?


೧೪.೦೬.೨೦೦೫

Monday, August 1, 2011

ನಿನ್ನಂತರಾಳವನು ಹೇಗೆ ಅರಿಯಲಿ ನಾನು?

ನಿನ್ನಂತರಾಳವನು ಹೇಗೆ ಅರಿಯಲಿ ನಾನು
ಎಂದೆನ್ನ ಟೀಕಿಸಿದ ನನ್ನ ಸ್ನೇಹಿತನು

ಅವಳ ತುಟಿ ನೋಡಿದರೆ ಇದ್ದಿಲಿನ ನೆನಪಂತೆ !
ಇಷ್ಟ ಪಟ್ಟೆನು ಮೊದಲು ಕಪ್ಪು ಬಿಳುಪಿನ ಪರದೆ,
ಈಗೀಗ ಬಣ್ಣಗಳು , ಹೊಸ ಬಗೆಯ ನೋಟಗಳು
ಬಯಸಿದ್ದು ತಪ್ಪೇ , ಅವನ ಅರಿಯದೆ ಹೋದೆ.

ನಡು ಸಣ್ಣಗಿರಬೇಕೆಂದು ರಸಿಕನಾಗಿಯೆ ಹೇಳಿ
ಮೊದಲು ಕೆಣಕಿರಲಿಲ್ಲ , ಈಗ ವಿರಕ್ತಿಯ ಸೋಗು
ಬಯಸುವುದು ತಪ್ಪೆಂದು ಆಗಾಗ ಒದರುವನು
ಸುಂದರತೆ ಬದುಕಲ್ಲ ಎಂದೆನ್ನ ಗದರುವನು.

ಲತೆಯಂತೆ ಇರಲವಳು ನಾನೊ ಮರವಾಗುವೆನು
ಅಪ್ಪುಗೆಯೋ ಭೀಮನದು ಎಂದೆ ನಾನು
ಅಲ್ಲಿಯೋ ಇಲ್ಲಿಯೋ ಮರ ಸಾವು ಕಂಡಾಗ
 
ಇನ್ನೊಂದು ಮರಕೆರಗಿ ಬದುಕಲಾರದೆ ಲತೆಯು ?

ನಿನ್ನಂತರಾಳವನು ಹೇಗೆ ಅರಿಯಲಿ ನಾನು
ಎಂದೆನ್ನ ಟೀಕಿಸಿದ , ಈಗೆಲ್ಲ ಅವನು !



29.07.2011

Tuesday, July 26, 2011

ಸನ್ಯಾಸಿ ಹರಿವೆ


ನಾನು ಚಿಕ್ಕವನಿದ್ದೆ
ಅಜ್ಜ ಹರಿವೆ ನೆಟ್ಟರು..
ನನಗಂತೂ ಹರಿವೆ ಇಷ್ಟ,
ಬೆಳೆಯುವುದನ್ನೆ ಕಾದೆ.

ಚಿಗುರೆಲೆ ಬಂತು,
ನೀರೆರೆದೆ, ಗೊಬ್ಬರದ ಮೇಲೆಯೇ
ಅಬ್ಬರದ ಬದುಕು
ಅಬ್ಬಾ ಬೆಳವಣಿಗೆ !

ಇನ್ನೂ ಆರೈಕೆ
ಕಳೆಗಳ ತೆಗೆದೆ
ಮತ್ತೆ ಹರಿವೆಯ ರುಚಿ ನೆನೆದು
ಮತ್ತೆ ನೀರೆರೆದೆ.

ಕಾದೆ, ಕೇಳಿದೆ
ಹರಿವೆ ಬೆಳೆದಂತೆ
ಯಾವತ್ತು ಹರಿವೆ ಅಡುಗೆ
ಕಾದಿತ್ತು ಬಾಯಿ ರುಚಿಗೆ !

ಅಜ್ಜ ಕೊಯ್ಯಲೆ ಇಲ್ಲ
ಮತ್ತೆ ಗದರಿದರೆನಗೆ
ಇದು ಸಾಂಬಾರಿಗೂ ಅಲ್ಲ, ಪಲ್ಯಕ್ಕೂ ಅಲ್ಲ
ಮುಂದಿನ ವರುಷದ ಬಿತ್ತನೆಗೆ ಮಗನೆ !

ಹರಿವೆ ಬೀಜ ತೆಗೆದಿಟ್ಟರು
ಅಜ್ಜ ರುಚಿ ನೋಡದೇ ಸತ್ತರು
ಸನ್ಯಾಸಿಯಂತೆ,
ಒಳ್ಳೆಯ ಬೀಜ , ಬಿತ್ತುವ ಹಾಗಿಲ್ಲ ಈಗ !

೨೬.೦೭.೨೦೧೧- ಮಂಗಳವಾರ

ನಿರೀಕ್ಷೆ ..


ನೀರಾಟಕಿಳಿದೆ ನಾ ನೀರೆಯರಾ ಸೊಬಗಿನ
ದಾರಿ ನೀ ತೋರಿದೆಯ ಮಾರ್ಮಲೆವ ಮಡುವಿನೊಳು
ಹೆಸರಾಟ ಬರಿ ಕೆಸರ ಪಾಚಿಗಟ್ಟಿದ ಬಣ್ಣ
ಉಸಿರ ಬದುಕಿಸೊ ಆಟ ಅವಳಿಗೋ ಅವನಿಗೋ
ಮಸಳುವುದು ಒಳಹೊರಗೆ ನಿತ್ಯ ನೂತನ ಎಂಬ ಹಳೆಯ ಸರಕು !

ಆ ನೀರು ನೀಲಿಯದಂತೆ, ಬಾನು ನೀಲಿಯದಂತೆ
ಅಣಕಿಸುವ ಕಣ್ಣಾಲಿ ! ಎಲ್ಲ ಕಪ್ಪಿನ ಮೇಲ್ಮೆ
ಒಳಗೆ ಎದೆ ಬೆಳ್ಳಿಯದು , ಕಟ್ಟು ಚಿನ್ನದ್ದಂತೆ
ತೊಳೆದು ಹೋಗುವುದಿಲ್ಲ, ತಳೆದರದು ಕರಗದು
ಸುಳಿವು ಮರಣದ ಕಪ್ಪು, ಜನನ ಬಿಳುಪೇ ?

೧೧.೦೭.೨೦೧೧



Saturday, July 9, 2011

ನೀರಾ(ರೆ)ಟ ..

ನಾನು ನೀರಿಗಿಳಿದರೆ ಸರಿಯಾಗಿ ಈಜಾಡಬೇಕು
ಪಿಚಕ್ಕನೆ ಚಿಮ್ಮುವ ಕೆಸರ ಹರಿಸುವ ನೀರಲ್ಲ
ಸೊಂಟದ ವರೆಗೆ ಬಂದು ಹಣಕಿಸುವ ನೀರೂ ಅಲ್ಲ
ನಾಭಿಯ ಮೇಲಿಂದ ಸುಳಿ ಹಾರುವ
ಅಂಗಾತ ಮಲಗಿ ನೀಲ ಬಾನು ತೆರೆವ
ತೆರದಲಿ, ಕಂಠದ ವರೆಗೂ ಇರಲಿ
ನಾನೂ ಈಜಬಲ್ಲೆ ಎನ್ನುವ ಅಭಿಮಾನ ಉಕ್ಕಿಸಿ
ಏನನ್ನೋ ದಕ್ಕಿಸುವ ನೀರು ಬೇಕು
ಮತ್ತೆ,
ನಾನೆ ನೀರನು ಎರೆದು ಆಟ ಆಡುವುದಲ್ಲ
ಆ ನೀರ ನೀರೆಯೊಳು ನಾ ಮುಳುಗಬೇಕು.

07.07.2011

Wednesday, July 6, 2011

ಹೀಗೆ ಇನ್ನೂ ಕೆಲವು ಲೈನ್ಸ್...


ಅಮ್ಮ ಜಾಸ್ತಿ ಇದ್ದ ಮಜ್ಜಿಗೆಯನ್ನು ಚೆಲ್ಲಿದರು
ಬೆಳಗ್ಗೆ ಕಾಣಲೆ ಇಲ್ಲ!
ರಾತ್ರಿ ಚಂದ್ರನ ಆಗಸದಲ್ಲಿ ನೋಡಿದಾಗ ಮಜ್ಜಿಗೆ ಹರಡಿದಂತೆ.

ಲತೆಯಂತೆ ಬಳುಕಿದಳು
ಮರವಾಗ ಬಯಸಿದಳು! ಯಾರವರು?
ಕೇಳ್ದಾಗ ಪೇಳಿದೆ, ಜಯಲಲಿತಾ!!

ರೇತಸ್ಸು ಪದದ ಅರ್ಥ ಕೇಳಿದ!
ಗೊತ್ತಿರಲಿಲ್ಲ ಅವಗೆ, ಅವನೀಗ ಅದೇ ಪದಾರ್ಥದಿಂದ
ಎಂಟು ಮಕ್ಕಳ ತಂದೆ !!

೨೮.೦೬.೨೦೧೧

Saturday, June 25, 2011

ಕೃಷ್ಣಾಯಣ



ನಿನ್ನೆ ನಾನು ಕಂಡೆ ಕನಸ
ಪಾತ್ರ ಅದಲು ಬದಲು
ರಾಮನಿಲ್ಲ ತ್ರೇತಾಯುಗದಿ
ಕೃಷ್ಣ ಜನುಮವಾಗಲು

ಅಂತು ಇಂತು ಕೃಷ್ಣ ಕೂಡ
ರಾಮನಂತೆ ಕಾಡಿಗೋದನು
ಕೊಂದನೆಲ್ಲ ರಕ್ಕಸರ
ಮುನಿಗಳನ್ನ ಕಾಯ್ದನು

ಕೃಷ್ಣನಾದರೇನು ಇಲ್ಲಿ ಕೂಡ
ರಾವಣೇಂದ್ರ ಬಂದನು
ಸೀತೆಯನ್ನು ಆಗಿನಂತೆ
ಈಗಲೂ ಕದ್ದೊಯ್ದನು

ಮುಂದುವರೆದ ಕೃಷ್ಣ ಕೂಡ
ವಾನರರ ಕೂಡಿಕೊಂಡ
ಕೃಷ್ಣನಿಗೆ ಸೀತೆ ತರುವ ಭಾಷೆ
ಕೊಟ್ಟ ವಾನರ ಮುಖಂಡ

ಹನುಮ ಹೊರಟ ಸೀತೆಯನ್ನು
ಹುಡುಕೊ ಹುರುಪಿನಿಂದ
ಕಂಡು ಕರೆದುಕೊಂಡು ಬಾರೊ
ಎನುವ ಮಾತು ಕೃಷ್ಣನಿಂದ

ಕಂಡ ಸೀತಾಮಾತೆಯನ್ನು ಹನುಮ
ಪೇಳ್ದ ಕೊಟ್ಟು ಉಂಗುರ
ಮಾತೆಯನ್ನು ಹೊತ್ತು ಹಾರಿ
ಬಂದ ಕೃಷ್ಣನ ಹತ್ತಿರ.

ಕದ್ದ ಲಂಕಾಧೀಶನೆದುರು
ಯುದ್ಧ ಮಾಡಲಿಲ್ಲ
ವರ್ಷ ಮುಗಿಸಿ ರಾಜ್ಯ ಸೇರಿ
ಸುಖದಿ ಇದ್ದರೆಲ್ಲ.

೧೮.೦೬.೨೦೧೧

Tuesday, June 14, 2011

ಓಹ್ ಮಿಡತೆ


ಓಹ್ ಮಿಡತೆ.. ಈಗ ನಿನ್ನಂತೆ ನನ್ನ ನಡತೆ

ಮೊದಲು ಹೀಗಿರಲಿಲ್ಲ, ಈಗ ನಿನ್ನಂತೆ.
ಹಾಗೆಂದು ಹುಲ್ಲು ತಿನ್ನುವುದಿಲ್ಲ
ಅಡಗಿ ಕೂರುವುದಿಲ್ಲ
ಓಡಿ ಆಡುವುದಿಲ್ಲ

ಬರಿಯ ನೆಗೆದಾಟ ಅಷ್ಟೆ.
ನಿನ್ನಂತೆ ನನಗೂ ಗೊತ್ತಿಲ್ಲ
ಯಾರ ಬದುಕಿನ ಬೇಟ?
ಯಾವ ಕಪ್ಪೆಗೆ ಊಟ ?


೧೨.೦೬.೨೦೧೧ 



"ಚಿತ್ರ ಕೊಟ್ಟ ನರೇಶ್ ಭಾವ ಅವರಿಗೆ ಮತ್ತೆ ಫೋಸು ಕೊಟ್ಟ ಮಿಡತೆಗೆ " 

Sunday, June 12, 2011

ಕೆಲವು ಲೈನುಗಳು, ಕವನವಾಗದೇ ಉಳಿದದ್ದು ..

ಸವಾಲು ಇಲ್ಲದ ಜೀವನ
ಟವೆಲ್ಲು ಇಲ್ಲದ ಸ್ನಾನ - ಎರಡೂ ಒಂದೇ ರೀತಿ ಅಲ್ವಾ?
 
ಸವಾಲು ಬರಿಸೋದು ಕಣ್ಣೀರು
ಟವೆಲು ಒರೆಸೋದು ತಣ್ಣೀರು
ರಾಮನಿಗೆ ವನವಾಸ ಎಂದರಿತ ಸೀತೆ ಹೋದಳವನ ಜೊತೆ ಕಾಡಿಗೆ
ಇವಳು ತವರು ಮನೆ ಸೇರಿದ್ದಾಳೆ , ಅವ ತರಲಿಲ್ಲ ಸೆಂಟು ಪೌಡರು ಮತ್ತೆ ಕಾಡಿಗೆ !!
ರಾಮ ನಾನಾಗಲಿಲ್ಲ, ಏಕೆಂದರೆ
ಕಾಡಿಂದ ಬರುವ ಮೊದಲೇ ಸೀತೆ
ನಾನು ಇನ್ನೊಬ್ಬಳಿಗೆ ಸೋತೆ !
ಪ್ರಿಯೆ , ಕೊಡುವೆಯಾ ಒಂದು ಮುತ್ತು
ಉಹುಂ.. ಎಷ್ಟಿದೆ ನಿನ್ನ ಬಳಿ ಸೊತ್ತು?
ಸೊತ್ತಿಲ್ಲ ನನ್ನಲ್ಲಿ, ತೋರು ನಿನ್ನಯ ಕತ್ತು
ತಾಳಿ ಕಟ್ಟುವುದಷ್ಟೆ ನನ್ನ ತಾಕತ್ತು !!
ಗೆಳತಿ ,
ಹೃದಯದ ನೋವು ದೊಡ್ಡದಾಗಿತ್ತು ನೀನು ಬಿಟ್ಟಾಗ
ಅದಕಿಂತ ನೋವಿದೆ,ಗೊತ್ತಾಗದೇ ಕಾಲುಗುರು ಕಿತ್ತಾಗ !!
ಹಿಂದೆ ಎಷ್ಟು ಸಲ ಅತ್ತಿದ್ದೆ ನಿನಗಾಗಿ ನೊಂದು
ಈಗಲೂ ಅಳುತಿರುವೆ ಈರುಳ್ಳಿ ಕೊರೆದು !!
ಬಂದ ಭಾವಕ್ಕೆ ಬಂಧನವಿಲ್ಲ, ಬಿಡುಗಡೆ !
ಎ೦ದವನು ಒಬ್ಬನ ಕೊ೦ದ
ಇ೦ದವನ ಬಿಡುಗಡೆ !!

Saturday, May 7, 2011

ಕವನ !

ಕವನ ಬರಿಯುವ ಹುಡುಗ
ಬರೆದ ಕವನ ... ಬರೆವಾಗ ಇಷ್ಟೇ ಬರೆದ .



ವಿಮರ್ಶಕ ಒಳ್ಳೆಯವ ,
ಬರೆದ ವಿಮರ್ಶೆ
ಕ -ಕಲಿಯುಗದಲ್ಲಿ
ವ - ವನಗಳು , ಪರಿಸರ
ನ - ನಶಿಸಿ ಹೋಗುತ್ತದೆ !!

ಈಶ್ವರ ಕಿರಣ ಭಟ್ 
೨೯. ೦೪ .೨೦೧೧

Sunday, May 1, 2011

ನಲ್ಲೆ ನೋಡು ಇಲ್ಲಿ ಸುರಿವ ಮಂಜಿನ ಮಳೆ..


ನಲ್ಲೆ ನೋಡು ಇಲ್ಲಿ ಸುರಿವ ಮಂಜಿನ ಮಳೆ
ಮೆಲ್ಲನುಲಿದ ನಲ್ಲನ ದನಿ ಕೇಳಿತೆ ಇಳೆ ?

ಹಸಿ ಹಸಿರಿಗೂ ಹಸಿರು ತಂದ ಹಸಿರಿನಾ ಮಳೆ
ಹುಸಿಮುನಿಸಲು ನಗುವರಳಿದ ಪ್ರೇಮವೀ ಮಳೆ
ಬಿಸಿಯುಸಿರಿನ ಭಾವ ತಂದ ಬದುಕಿನಾ ಮಳೆ
ಹೊಸ ಜೀವಕೆ ಜೀವ ತಂದ ಕಾವಿನಾ ಮಳೆ

ಕಸಿದ ಪ್ರೇಮ ಪ್ರಣಯವೆಲ್ಲ ಉಸಿರಿತೆ ಮಳೆ
ಬೆಸೆದ ಬಂಧ ಚಂದಕೆಲ್ಲ ಸಾಕ್ಷಿಯಾ ಮಳೆ
ಹೊಸೆದ ಸೊಗದ ಭಾವಕೆಲ್ಲ ನಾಚಿತೆ ಮಳೆ ?
ಹೊಸದು ಜಗದ ಸೃಜಿಸಿ ಕುಣಿದಳೀ ಮಳೆ !

ನಲ್ಲೆ ನೋಡು ಇಲ್ಲಿ ಸುರಿವ ಮಂಜಿನ ಮಳೆ
ಮೆಲ್ಲನುಲಿದ ನಲ್ಲನ ದನಿ ಕೇಳಿತೆ ಇಳೆ ?


Tuesday, March 29, 2011

ರಾಧಾ ಕೃಷ್ಣಾ .......

 
ಕೊಳಲೂದಿ ಸಖಿಯರನು ಕರೆದನಾ ಗೊಲ್ಲ
ರಾಧೇ ನಿನ್ನನು ಉಳಿದು ಬಂದಿರುವರೆಲ್ಲ !

ಯಮುನಾ ನದೀ ತೀರದಲಿ ಓಡಿ ಕರೆದ
ಹುಡುಕಾಡಿ ಬಸವಳಿದನು ವಿರಹದಿಂದ
ರಾಧೇ ಎನುವ ಕೂಗು ನೀ ಕೇಳಲಿಲ್ಲ
ಕೇಳಿದೆಯೋ, ಮರೆತಿಹೆಯೋ ನೀ ಬಾರಲಿಲ್ಲ !!
----
ಕೃಷ್ಣಾ ನೀ ಕರೆದಾಗ ನಾ ಬಾರದಿಹೆನೆ ?
ನೀ ಸಿಗದೇ ಆರುವುದೇ ವಿರಹದಾ ಬೇನೆ ?
ಹೂವನ್ನೇ ತುಂಬಿರುವ ಪ್ರೇಮದುದ್ಯಾನ ನೀನು
ಅಲ್ಲೆಲ್ಲೋ ಸೆರೆಸಿಕ್ಕ ಬಿಡಿಹೂವು ನಾನು

ಕೊನೆಯೆ೦ತೊ ಅರಿಯದಿಹ ಈ ಪ್ರೇಮ ಕತೆಗೆ
ನೋವ ಬೆನ್ನುಡಿ ಇಹುದೆ ಪ್ರೀತಿ ಉನ್ನತಿಗೆ ?

ಈಶ್ವರ ಕಿರಣ ಭಟ್
ಆಗಸ್ಟ್ ೨೦೧೦

Sunday, March 27, 2011

ಕುಟುಕುವ ಚುಟುಕ ...

ನನ್ನ ಕೇಳಿದನೊಬ್ಬ ಏನು ಪ್ರಾಸ, ಛಂದಸ್ಸು
ಇದರಿಂದ ಸಾದ್ಯವೇ ಜಾಸ್ತಿ ಆಯುಸ್ಸು
ನಾನೆಂದೆ , ಇದು ಮುಖ್ಯ ಗಳಿಸಲಿಕೆ ಭೇಷು !
ಇಲ್ಲವಾದರೆ ಗಳಿಸಬಹುದಲ್ಲ ಕಾಸು ?!

ರಕ್ತಕ್ಕು ಸ್ವಾರ್ಥಕ್ಕೂ ಎಲ್ಲಿಹುದು ನಂಟು ?
ಸ್ವಾರ್ಥವಿರುವುದು ಇದ್ದಲ್ಲಿ ಗಂಟು
ಈಗಾಗುತಿಹುದಲ್ಲ , ಇಲ್ಲೆಲ್ಲಾ ಉಂಟು
ರಕ್ತದಾನವಿದಲ್ಲ , ಬರಿ ಆಕ್ಸಿಡೆಂಟು !!
 
ಕವಿರಾಯ ನೀ ಕೇಳು ನನ್ನ ಕೈಲಿದೆ ಗನ್ನು
ಇದಕಿಂತ ಹರಿತವೆ ನಿನ್ನ ಕೈಲಿಹ ಪೆನ್ನು ?
ಈ ಪ್ರಶ್ನೆಗುತ್ತರವ ಆಮೇಲೆ ಕೇಳು
ಮೊದಲಾಗಲಿ ಹಸಿದವಗೆ ಹಾಲು,ಬನ್ನು !!

ಮಗುವೆ ನೀ ಕೇಳು ಈ ಜಗದೊಳಿಟ್ಟಿಹರು ಎಲ್ಲಾ
ಸುಣ್ಣ ತಿನ್ನುವುದ್ಯಾಕೆ ಇಹುದಲ್ಲ ಬೆಲ್ಲ !
ನಿನ್ನ ನಗುವನೇ ನಂಬಿ ಕುಳಿತವರು ಇಹರು
ನೀನತ್ತೆ ಎಂದರೆ ಅವರ್ಯಾರು ನಗರು!!

ಈ ಕಷ್ಟ ಸುಖಗಳಿವು ತಿಳಿದಂತೆ ಜೇಪಿ !
ಟೀ ಕುಡಿದಾದ ಮೇಲ್ ನೆನೆದಂತೆ ಕಾಪಿ!!
ಸಿಗದ ವಸ್ತುಗಳಿಲ್ಲ ಈ ಜಗದಿ ಕೇಳು
ಇರುವಲ್ಲಿವರೆಗೆ ನೀ ನಗುನಗುತ ಬಾಳು ..






Tuesday, March 15, 2011

ನನ್ನ ಒಲವಿನ ಹುಡುಗಿ..

ನನ್ನ ಒಲವಿನ ಹುಡುಗಿ ಬೆಳ್ಳಕ್ಕಿ ನಗು ಚೆಲ್ಲಿ 
ಕಾದಿಹಳು ನನ್ನ ನಗೆ ನೋಡಲೆಂದು 
ಮಾತು ಕನಸುಗಳಲ್ಲಿ ಅವಳೆ ಹರಿದಾಡುವಳು 
ಮತ್ತೆ ಬರುವಳು, ಎಲ್ಲಿ? ಎಂದು ?

ಅವಳು ಮಾತಾಡಿದರೆ ನಾನು ಮಾತನೆ ಮರೆತು
ಮೀಯುವೇನು ಅವಳುಸಿರ ಹಾಡಿನಲ್ಲಿ 
ನಾನೊಮ್ಮೆ ಮುನಿದರೂ ಅವಳ ದನಿ ತಡೆಯುವುದು
ಮತ್ತೆ ಕರಗುವೆ ಒಲವ ಮಾತಿನಲ್ಲಿ

ಅವಳು ಮಾತಾಡದಿರೆ ನನ್ನ ದನಿ ಅಡಗುವುದು
ನೋಯುವುದು ನನ್ನ ಮನ ಅವಳ ಹುಡುಕಿ 
ಎಲ್ಲೋ ಕರೆದಂತೆ , ಕರೆದು ದನಿ ಕೊಟ್ಟಂತೆ 
ಕಾಯುವೆನು ಎಲ್ಲ ದಿನ ಅವಳಿಗಾಗಿ..


ಈಶ್ವರ ಕಿರಣ ಭಟ್
೧೦/೦೩/೨೦೧೧

Wednesday, February 9, 2011

ಬಾಲಿಶ ಕವನಗಳು !! 24,, ಕೆರೆಗೊಂದು ಕಲ್ಲು !


ತಿಳಿನೀರ ಮೇಲೊಂದು ಕಲ್ಲು

ಅಲೆ ಅಲೆಯಾಗಿ ಹೊರತ ನೀರು
ಇನ್ನೊಂದಲೆಯ ಮುಟ್ಟಿ .. ಸುಮ್ಮನೆ
ವೃತ್ತಾಕಾರವಾಗಿ ..

ಆಹಾರ ಬಿತ್ತೆಂದು ಏಳುವ ಮೀನು
ಸಾಮಾನ್ಯವೆ೦ಬ೦ತಿರುವ ದೊಡ್ಡ ಮೀನು
ಮೇಲೆ ಬರುವ ಮೀನನ್ನೇ ಕಾಯುವ ನೀರೊಳ್ಳೆ
ಮತ್ತೆ ಆ ಕಲ್ಲಿಗೆ ಕೃತಜ್ಞತೆಯ ನೋಟ

ಕೊನೆಯ ಮುಟ್ಟಿದ ಕಲ್ಲು
ಕೆರೆಯ ನೀಲಿಯ ಸ್ವಲ್ಪ ಕೆಸರಾಗಿಸಿ
ತಳದಲ್ಲಿಯೇ ಭದ್ರ
ಕೆಸರೋ ಅಲ್ಲಲ್ಲಿಯೇ ಚದುರಿ ಸ್ಥಳಾಂತರ
ನೋಡುಗರಿಗೆ ಕೆರೆ ಹಾಗೆಯೇ
ಶಾಂತ ,ಸಮಾಧಾನಿ

ಆಹಾರ ಹುಡುಕುವ ಮೀನು
ಮೀನು ಕಾಯುವ ಹಾವು
ಸ್ಥಳಾಂತರ ಬಯಸುವ ಕೆಸರು
ಕಾಯುವುದು
ಇನ್ನೊಂದು ಕಲ್ಲಿಗೆ !!

04/10/2004

Thursday, February 3, 2011

ಬಾಲಿಶ ಕವನಗಳು !! 23 ಮೊದಲ ನೋಟಕೆ !!

ಮೊದಲ ನೋಟಕೆ ಯಾವ ಭಾವವೋ
ಸುಳಿಯಿತೇನೋ ಮನಸಲಿ
ಒಡಲ ಮಾತನು ಬಯಸಿ ಹೇಳಿದೆ
ಪಡೆದೆ ಏನೋ ನೆನಪಲಿ

ಬರಿಯ ಆಸೆಗೆ ಹಗಲು ಕನಸಿಗೆ
ಗೆಲುವೆ ಹೊಸಕಿತೆ ನಗೆಯನು ?
ಕಳೆದೆ ಏತಕೆ ಪ್ರೀತಿ ಮಾತನು ?
ಒಲವೆ ಇರಿಯಿತೆ ನನ್ನನು?

ನೂರು ನೋವಿನ ಎಲ್ಲೆಯಾಚೆಗೆ
ಎಲ್ಲೋ ನಲಿವಿನ ನಗುವಿದೆ
ಮುನಿಸು ವಿರಸದ ತೋಟದಲ್ಲಿಯೇ
ಹೊಸತು ಪ್ರೇಮದ ಗಿಡವಿದೆ

ಹಾರೋ ಚಿಟ್ಟೆಯೇ ಏರು ಮೇಲಕೆ
ಹೂವ ತೊರೆ ಹಳೆ ನೆನಪನು
ಮೇಲೆ ಕಾಣುವ ತಾರೆಯೊಲುಮೆ
ಗಳಿಸು ;ಪ್ರೀತಿಯ ಬಾಳನು .


29/01/2005 

ಬಾಲಿಶ ಕವನಗಳು !! 22 ಹೂವಿಗೆ

ದುಂಬಿ ಮರೆತಿದೆಯೇನು ಈ ಹಳ್ಳಿ ಹೂವನ್ನು
ಗಾಳಿ ತೊರೆದಿದೆಯೇನು ಈ ಗಂಧವ ?
ಗಿಡವೆ ಮುನಿದಿದೆಯೇನು ಈ ಭೂಮಿ ತಾರೆಯಲಿ
ಕಡಿದಿದೆಯೆ ಮುಳ್ಳುಗಳು ಈ ಬಂಧವ?

ಎಳೆಬಿಸಿಲ ತೋರದೆಯೆ ಮೋಡ ಮರೆಯೊಳಗಿಂದ
ಬಂದಿಹನು ನೇಸರನು ನೆತ್ತಿಮೇಲೆ
ಹೂವು ಬಾಡಿಯೆ ಇಲ್ಲ , ಅಂದಕ್ಕೆ ಸಮನಿಲ್ಲ
ಏನಿದರ ಒಳಗುಟ್ಟು ? ಸೃಷ್ಟಿಲೀಲೆ !


ಬಯಕೆ ಸೊರಗಿದೆ ಮಲ್ಲೆ ;ಬೇಕು ಕಹಿ ಬಾಳಿನಲಿ
ಇಲ್ಲವಾದರೆ ಸಿಹಿಯ ರುಚಿಯು ಗೊತ್ತೇ?
ಏನಾದರೇನಂತೆ ಕೊರಗದಿರು ಓ ಹೂವೆ
ಕಡಲೊಳಿಹುದು ನೋವು , ಅದುವೆ ಮುತ್ತೇ !!

ನಿನ್ನ ತೊರೆದವರೆಲ್ಲ ಬಂದೆ ಬರುವರು ಬಳಿಗೆ
ಬರದಿದ್ದರೇನಂತೆ ಹೊಸ ದುಂಬಿ ಬರಲಿ !
ಗಗನ ದೀಪಿಕೆ ನೀನು ,ಹೊನಲ ಭೂಮಿಕೆ ನೀನು
ಎಂದೆಂದಿಗೂ ನಿನ್ನ ನಗೆ ಮೊಗ್ಗರಳಲಿ !

೦೭/೦೧/೨೦೦೫   

Monday, January 31, 2011

ಬಾಲಿಶ ಕವನಗಳು !! 21 ಪ್ರೀತಿಯಿರದೆ..?

ಪ್ರೀತಿಯಿರದೆ ಬಾಳು ಇದೆಯೇ 
ಬರಿಯ ಕತ್ತಲಲ್ಲವೇ ?
ಉಸಿರೆ ಇರದ ಜೀವವಿಹುದೆ
ಬರಿಯ ಮಾತಿದಲ್ಲವೇ?


ಎಷ್ಟೋ ನೋವು ಕೊಟ್ಟೆ ನೀನು 
ಪ್ರೀತಿ ಹೂವ ಮುಡಿದಳವಳು
ಬೇಸರದಾ ಬೆಂಕಿಯೆದೆಗೆ
ಒಲುಮೆ ಹಸಿರ ತುಂಬಿದವಳು 
    ಮರೆತೆಯೇನು ನಿನ್ನ ಋಣವ
    ತೊರೆದೆಯೇನು  ಬಾಳ ಗೆಲುವ
    ಎಲ್ಲ ಶೂನ್ಯವಲ್ಲವೇ?


ನೀನೋ ಬಯಕೆ ಬುತ್ತಿ ನೀಡಿ 
ಮರೆತು ಸುಮ್ಮನೋಡಿದೆ
ಅವಳೋ  ಕಾಯುತಿಹಳು 
ಒಲಿಯದೆ ನಿನ್ನ ಕಲ್ಲೆದೆ ?
    ನಿಲಿಸು ನಿನ್ನ ಕೆಟ್ಟ ಛಲವ
    ಹರಿಸು  ನೀನು ಪ್ರೀತಿ ನಗುವ 
    ಎಲ್ಲ ಬದುಕು ಬೆಲ್ಲವೇ 


ಚಂದ್ರನಿರಲಿ ತಾರೆಯಿರಲಿ
ಬೆಳಗುತಿರಲಿ ಮೆಲ್ಲಗೆ 
ಹರಸುತಿರಲಿ ಪ್ರಕೃತಿಯೊಲವು 
ಗೆಲಲಿ ಪ್ರೀತಿ ಮಲ್ಲಿಗೆ 
    ಬರಲಿ ರಸದ ಜೀವ ನದಿಯು 
    ಇರಲಿ ಹೊನಲ ಬಾಲ ಕೆಲೆಯು
    ಎಲ್ಲ ಹರಕೆಯಲ್ಲವೇ .


೩೦/೦೧/೨೦೦೫ 

Monday, January 24, 2011

ಬಾಲಿಶ ಕವನಗಳು !! 20 ಮಾತು -ಮೌನ

ಮಾತಿನಿಂದೇನು? ಮೌನದಿಂದೇನು
ಮಾತು ಮೌನಗಳೆಲ್ಲ ನೆವವು ನಿನಗೆ
ಕಿರಣ ಮಾತಾಡುವುದೇ ಆ ಮಲ್ಲೆ ಹೂವಲ್ಲಿ ?
ಪ್ರೇಮ ಕರೆದಿಹುದೆನ್ನ ನಿನ್ನ ಬಳಿಗೆ !

ಮನಸೊಳಗೆ ಕನಸಾಗಿ ನೀ ಹರಿಯುತಿರುವಾಗ
ಮಾತೆಂಬ ನದಿಗಿಲ್ಲಿ ಬರಿ ಮೌನವೆ
ನಿನ್ನ ಪ್ರೇಮದ ಮಾತು ಕೇಳುವುದು ನನ್ನೆದೆಗೆ
ಮತ್ತದೇ ಮೌನದಲಿ ನಾ ಹೇಳುವೆ

ಆಗೊಮ್ಮೆ ಈಗೊಮ್ಮೆ ಮಾತು ಉರುಳಾಡಿತ್ತು
ಹಾರಿತ್ತು ಬಾನಕ್ಕಿ ಸಾಲು ಸಾಲೆ
ಹೊಸತು ಮೌನದ ಹಾಡ ನೀ ಮುಡಿಯುತಿರುವಾಗ
ಮುಂಗಾರು ಮೋಡಕ್ಕೆ ಬೆಳ್ಳಿ ಮಾಲೆ

ಮಾತು ಬರಿ ಮಾತಿಗೆ ;ಮೌನ ನಿಜ ಪ್ರೀತಿಗೆ
ಎರಡರಲಿ ನನಗಿಷ್ಟ  ನಿನ್ನ ಮೌನ
ನಿನ್ನಂತರಾಳದಲಿ ಎರಡಕ್ಕೂ ಅರ್ಥವಿದೆ
ಹುಣ್ಣಿಮೆಯ ಬೆಳಕಿನಲಿ ಹೊಳೆವ ಗಗನ !

ಮಾತಿರಲಿ ನಗೆಯಾಗಿ , ವಿರಸ ಮೌನದಲಿರಲಿ
ಅದರಾಚೆಗೆ ಎಲ್ಲ ನೋವು ಇರಲಿ
ಮಾತು -ಮೌನದಿಂದಲ್ಲ ಪ್ರೀತಿಯ ಸಾರ
ಸಮರಸದಿ ಈ ಬಾಳು ಎಂದು ನಗಲಿ


೦೧/೦೨/೨೦೦೫  

Friday, January 21, 2011

ಬಾಲಿಶ ಕವನಗಳು !! 19 ಕತ್ತಲ ಪಯಣ


ಕವಿದ ಒಂದು ಕೆಟ್ಟ ಇರುಳು
ನನ್ನ ಬೇರೆ ಮಾಡಿದೆ
ಸಿರಿಯೇ ನಿನ್ನ ಒಲುಮೆ ಎಂಬ
ನೆನಪಿನಲ್ಲೇ ಕೊರಗಿದೆ

ಒಮ್ಮೆ ನೀನು ಒಮ್ಮೆ ನಾನು 
ಮನದಿ ಬರುವ ಚಿತ್ರ ನೂರು 
ಒಂದೇ ನೆನಪು ಒಂದೇ ಕನಸು 
?ಒಂಟಿ ಪಯಣ ಎಲ್ಲಿಗೋ
ಬಾನು ಕಡಲು ಕೋಟಿ ಚುಕ್ಕಿ
ಈಜುವಂತೆ ಮಾಡಿದೆ
ಚಂದ್ರನಿಲ್ಲ ! ಇರುಳು ಗಾಢ
ಬರಿಯ ಬೆಳಕು ಕಾಡಿದೆ

ನದಿಯು ಒಂದು ದಡಗಳೆರಡು
ಒಂದೆ ಮನಸು ದಾರಿ ಕುರುಡು 
ಬರಿಯ ನಗುವು ಮಾತ್ರ ಸಾಕು 
ಬರಡು ಬಾಳ ಸವಿಯುವೆ

ಪ್ರೇಮ ಸುಧೆಯು ಬತ್ತದಿರಲಿ 
ರಸದ ಗಂಗೆ ಆರದಿರಲಿ
ಬದುಕು ಎಂದೂ ಬೆಳಗುತಿರಲಿ
ಎಂಬ ಹರಕೆ ನಿತ್ಯವೂ ..

೧೫/೧೨/೨೦೦೪ 

ಬಾಲಿಶ ಕವನಗಳು !! 18 ಶಾಂತಿ ,ಪ್ರೀತಿ, ವಿಶ್ವಾಸ ಮತ್ತೆ ನಂಬಿಕೆ !

ಒಂದು ಕೋಣೆ, ನಾಲ್ಕು ಹಣತೆ 
ಶಾಂತಿ ,ಪ್ರೀತಿ, ವಿಶ್ವಾಸ ಮತ್ತೆ ನಂಬಿಕೆ !


ನಾನು ಶಾಂತಿಯ ರೂಪ 
ಈಗ ಯಾರಿಗೆ ಬೇಕು?
ಹಾರಿ ಹೋಗುತ್ತೇನೆ ಎಂದು ಆರಿಹೋಯಿತು.


ನಾನು ಪ್ರೀತಿಯ ಜ್ಯೋತಿ 
ನನ್ನ ಪ್ರೀತಿಸುವವರಿಲ್ಲ
ಆರಿ ಹೋಗಿ ಪ್ರೀತಿ ಹಾರಿಹೋಯಿತು !


ಶಾಂತಿ, ಪ್ರೀತಿಯಿಲ್ಲದೆ ನಾನಿಲ್ಲ
ಬದುಕುವ ವಿಶ್ವಾಸವೂ ಇಲ್ಲ 
ಎಣ್ಣೆಯ ಕಮಟಿನಿಂದ ಮಾಯವಾಯಿತು 


ಬಾಗಿಲು ತೆರೆಯಿತು 
ಪುಟ್ಟ ಮಗು ದಿಟ್ಟ ಹೆಜ್ಜೆಯಿಂದ ಬಂದು ..
ಅಳುತ್ತಾ ಕುಳಿತುಕೊಂಡಿತು !!
......  ನಾನಿಲ್ಲವೇ ನಂಬಿಕೆಯ ಜ್ಯೋತಿ ?
ಹಚ್ಚು ನಂದಿ ಹೋದ ಮೂರು ಹಣತೆಯನ್ನು !
ಸಮಾಧಾನದಿಂದ ಮೂರೂ ಹಣತೆ ಹಚ್ಚಿ 
ಮಗು ಕುಣಿಯಿತು ..


೨೦೦೫  

Tuesday, January 18, 2011

ಬಾಲಿಶ ಕವನಗಳು !! 17 ನನ್ನ ಪ್ರೀತಿ

ನನ್ನ ಪ್ರೀತಿ 


ಹರಿವಲ್ಲಿ ಕಂಡೆ ನಿಂತಲ್ಲಿ ಕಂಡೆ 
ನಾ ನಿನ್ನ ಮುದ್ದು ಮುಖವ 
ಹೂವಲ್ಲು ನಗುವು ನಗುವಲ್ಲು ಹಾಡು 
ಇದಾವ ಬಗೆಯ ವಿಭವ ?


ಮನದೊಳಗೆ ನಿಂತು ಪಟವಾಗಿ ಮೆರೆವ 
ಬಯಕೆಯಲಿ ಪ್ರೇಮ ಜನ್ಯ 
ಎದೆಯೊಲವು ಹರಿದು ಭಾವನೆಯ ಬಣ್ಣ 
ತುಂಬಿರಲು ಬದುಕು ಧನ್ಯ


ಕಣ್ಣೊಳಗೆ ಅಡಗಿ ಆಡುತಲೇ ಇರುವ 
ಕನಸೆಲ್ಲ ಹೊರಗೆ ಬರಲಿ 
ಉಸಿರಲ್ಲಿ ಬೆರೆತು ಹಾಡಾಗಿ ಇರುವ 
ಮಾತೆಲ್ಲ ಬಿರಿದು ನಗಲಿ 


ನೀಡುವುದು ಪ್ರೀತಿ , ಪಡೆಯುವುದು ಅಲ್ಲ
ನಾನೆಲ್ಲ ಕೊಟ್ಟೆ ನಿನಗೆ 
ಹಿಂತಿರುಗಿ ಕೊಟ್ಟು ಋಣಮುಕ್ತಳಾಗೆ
ನಾ ಕೊಟ್ಟ ಪ್ರೀತಿ ನನಗೆ !!


೨೦೦೫  

ಬಾಲಿಶ ಕವನಗಳು !! 16 ನಾನು - ಅವನು

ನಾನು - ಅವನು 


ಒಂದೇ ದೇಹ ಒಂದೇ ಮನಸು 
ಒಂದೇ ಬಯಕೆ ಒಂದೇ ಕನಸು 
ಆದರೇನು ನಾನು ನೆಪವು , ಅವನು ಅವನೇ 
ಎಲ್ಲ ಪ್ರೀತಿ ಪಾತ್ರನೆ .


ಅವನೋ ದೂರ ಬೆಟ್ಟದಲ್ಲಿ 
ಇಣುಕಿ ನನ್ನ ಕರೆಯುತ್ತಿದ್ದ 
ಒಲುಮೆ ಮಾತನಾಡುತ್ತಿದ್ದ 
ಹಾಡುತ್ತಿದ್ದ , ಓಡುತ್ತಿದ್ದ , ಗುರಿ ಸಿಗದೀ ಪಯಣದಿ 
ಬಿಸಿಯುಸಿರು ಬಿಟ್ಟು ಕರೆದು ಮೋಡಿ ಮಾಡುತ್ತಿದ್ದ 
ನಾನೋ ನೋಡುತ್ತಿದ್ದೆ ಬಿಟ್ಟ ಕಂಗಳಲ್ಲಿ 
ಆಸೆ ಬಿಸಿಲಿಗೇರಿ ನೆರಳಿನಾಳ ನೋಡಿ ಮತ್ತೆ 
ಬೇಡುತ್ತಿದ್ದೆ ! ಅದೇ ಬೆಟ್ಟ ನೋಡುತ್ತಿದ್ದೆ .


ಅಲ್ಲಿ ನೀರ ಮೇಲೆ ನಡೆಯುತಾನೆ 
ನೀರಿನೊಳಗೆ ಕುದಿಯುತಾನೆ
ಮತ್ತೆ ನೀರ ಬಗೆಯುತಾನೆ 
ಹುದುಕುತಿಹನು ಮುತ್ತನು ! ಕಳೆದ ಬಾಲ್ಯ ಸೊತ್ತನು!!
ಅದೇ ದಡದ ಮರದ ಹಿಂದೆ
ಅಡಗಿ ಕುಳಿತು ಕರೆಯುತಿರುವೆ, ಕೂಗುತಿರುವೆ 
ಕಾಯುತಿರುವೆ ಸುಮ್ಮನೇ, ಬಾರದಿರುವ ಅವನನೇ..


ಬಿದ್ದು ಗೆದ್ದು ಹೋದನವನು 
ಸೋತು ಬಿದ್ದು ಹೋದೆ ನಾನು 
ಮತ್ತೆ ಗೆಲ್ಲಲೆಣಿಸಿ ಬಂದನವನು 
ನಾನೋ ನೋಡಿ ನಗುವೆನು , ಅವನೆದುರು ಗೆಲ್ಲಲಾರೆನು 
ಸೋತು ಮಡಿದೆನು !!



೨೦೦೫   

Monday, January 17, 2011

ಬಾಲಿಶ ಕವನಗಳು !! 15 ಕೊನೆಯ ಉಪದೇಶ .

ಕೊನೆಯ ಉಪದೇಶ 

ಅಜ್ಜಾ,
ನೀನು ಹಿಡಿದ ಕೊಡೆಯಂತೆ ,
ನಿನ್ನ ಊರುಗೋಲಿನಂತೆ
ಬಿಳುಪು ಕೂದಲಿನಂತೆ , ಸುಕ್ಕು ಚರ್ಮದಂತೆ ,
ನಿನಗೂ ವಯಸ್ಸಾಯಿತು !!
ಸುಮ್ಮನೆ ಇದ್ದು ಬಿಡು
ಸಾಕು ಉಪದೇಶ ಸಾರಗಳು
ನಾವು ನಮ್ಮ ಹಾಗೆ ಇರುತ್ತೇವೆ
ಹಾಗೆಯೇ ನೀವೂ .......

ಮೊಮ್ಮಗನೇ ..
ನಿನಗೆ ವಯಸ್ಸಾಗಿಲ್ಲ ,
ಊರುಗೋಲೂ ಬೇಡ , ಕೊಡೆಯೂ ಬೇಡ
ನಿನ್ನ ರೇಶಿಮೆ ಚರ್ಮವೂ ,
ಕಪ್ಪು ಕೂದಲೂ ದೀರ್ಘಾಯುವಾಗಲಿ !!
ಕೊನೆಗೆ ಒಂದು ಮಾತು !
ಬೆಳ್ಳಗಿರುವುದೆಲ್ಲಾ ಹಾಲಲ್ಲ , ಸರಿ
ಆದರೆ
ಹಾಲು ಮಾತ್ರ ಬೆಳ್ಳಗಿರಲೇಬೇಕು !!



೩೦/೦೬/೨೦೦೫

ಬಾಲಿಶ ಕವನಗಳು !! 14 ಮೂಡಣದಿ ರವಿಕಿರಣ...

ಮೂಡಣದಿ ರವಿಕಿರಣ ಬರಸೆಳೆದು ಚುಂಬಿಸಲು
ಬಾನೆಲ್ಲ ನಸು ನಾಚಿ ಕೆಂಪಾಯಿತೆ?
ತಂಗಾಳಿ ಅಲೆಗಳಲಿ ಮಂಜಹನಿ ಮುದ್ದಿಸಲು
ಅರಳು ಮಲ್ಲಿಗೆಗೀಗ ಕಂಪಾಯಿತೆ ?


ಗುಡಿಯಲ್ಲಿ ಮೊಳಗುತಿಹ ವಾದ್ಯ ವೃಂದದ ಸೆಳೆತ
ಹಕ್ಕಿಗಳ ಗೂಡಿನಲ್ಲಿ ಹಾಡಾಯಿತೇ ?
ತುಡಿಯುತಿಹ ಎದೆಗಳಲಿ ಪ್ರೀತಿ ಪ್ರೇಮದ ಧ್ವನಿಯು
ಈ ಬೆರಗು ಕಣ್ಣಿನಲಿ ಮಾತಾಯಿತೆ ?

ಹಚ್ಚ ಹಸುರಿನ ವಸುಧೆ ಹುಚ್ಚು ಬೆಳಕಿನ ಹಿಂದೆ
ಶರವೇಗ, ಮೌನದಲಿ ತಾನೋಡಿತೆ?
ಈ ಕೆಚ್ಚು ಮನದೊಡತಿ ಬಿಚ್ಚು ಮಾತುಗಳಿಂದ
ಒಲವು ಗೆಲವಿನ ರಾಗ ತಾ ನೀಡಿತೇ?

ಪಡುವಣದ ರವಿಯೀಗ ಮುಳುಗಡೆಯ ಹಾದಿಯಲಿ
ಬಾನೆಲ್ಲ ಶೋಕದಲಿ ಕಪ್ಪಾಯಿತೆ?
ಇನ್ನು ಎಲ್ಲಿಯ ಪ್ರೀತಿ? ಯಾವ ರೀತಿಯ ಬಂಧ ?
ಈ ಚಂದ ಬದುಕಿಗೆ ಮುಪ್ಪಾಯಿತೆ ?

೨೦೦೫

Thursday, January 13, 2011

ಬಾಲಿಶ ಕವನಗಳು !! 13 ಒಂದು ಚಿತ್ರ !!

ಗಿರಿಯ ಸಾಲಿನ ನಡುವೆ ಪುಟ್ಟ ಕೊಳ 
ಹತ್ತು ಮರ ಮುಂದೆ ಮನೆ 
ಬೆಳಗ್ಗಿನ ಕಿಟಕಿಯಲ್ಲಿ ಕೆಂಪು ಸೂರ್ಯ 
ಕರಗುವ ಮಂಜು ಹಿತವಾದ ಚಳಿ 
ಹನಿಬಿದ್ದ ಸದ್ದು, ಹಕ್ಕಿಗಳ ಮುದ್ದು 
ಮಡುಗಟ್ಟಿದ ನೀರ ಮೇಲೆ ಹೊಳೆವ ತಾವರೆ !

ಮಧ್ಯಾಹ್ನದುರಿಗೆ ತಾವರೆ ಎಲೆಯಲ್ಲಿ
ಬೆವರ ಸಾಲು, ಕಂಬನಿ ಚಿಮ್ಮಿ ನಿಂತದ್ದು 
ಶುದ್ದ ಸ್ಪಟಿಕದ ನೀರು , ಕದಕಿದರೆ ಕೆಸರು 
ಹರಿವಿರದೆ ಜಾರುವ ಜೊಂಡು ಹುಲ್ಲು 
ಸಂಜೆಯ ಮಾನಸ ಸರೋವರ !
ಅಲ್ಲಲ್ಲಿ ಹಂಸ ನೀರಕ್ಕಿಗಳು 
ಮತ್ತೆ ಮರ, ಮತ್ತೆ ತರಗೆಲೆ ಸದ್ದು 
ಹೊಗೆಯ ಅಬ್ಬರ , ಸುಮ್ಮನುರಿವ ಬೆಂಕಿ 
ಮುಳುಗಡೆಯತ್ತ ಪಡುವಣದ ಸೂರ್ಯ 

ಚಂದಿರನ ತಂಪುರಾತ್ರಿ, ಕೆಲವೊಮ್ಮೆ 
ಮಾತಿರದ ಕತ್ತಲು 
ಕೆರೆತುಂಬ ನಕ್ಷತ್ರ ಚಂದ್ರರು !!
ಸುಮ್ಮನೆ ಕೂಗುವ ಗೂಬೆ , ಊಳಿಡುವ ನಾಯಿ 
ಮತ್ತೆ ಮೌನ 
ಬೆಚ್ಚನೆಯ ನಿದ್ದೆಯ ಲೋಕ 


೨೦೦೫ 
(ಇಲ್ಲಿ ನಾನು ಮಗು,ತರುಣ, ಮದ್ಯ ವಯಸ್ಕ ಮತ್ತೆ ವೃದ್ದನನ್ನು ಕಲ್ಪಿಸಿಕೊಂಡಿದ್ದೇನೆ )  

Wednesday, January 12, 2011

ಅಡಕೆಮರಕ್ಕೆ !!!


ಹಸೆ ಹತ್ತಿ, ಕತ್ತೆತ್ತಿ..ಫಲ ಉಡುವ ಸಿರಿಯೆತ್ತಿ


ಹಣ್ಣಾಗಿ ,ಕೊನೆಗೆ ಮಣ್ಣಾಗಿ,
ಬಂಗಾರ ಬಾಳ್ ನಿಂದು , ಸಿಂಗಾರ ತಾಯೇ ..



ಅಗೆದಗೆದು ಉತ್ತೆ ನಾ ಪಡೆಯೆ ನಿನ್ನ ಫಲ,
ಮಣ್ಣೊಲವ ಮರೆತರೂ  ಬಿಡದೆ ನಿನ್ನಯ ಬೆನ್ನು ,
ಗರಿಕೆಯಂತಿದ್ದ ನೀನ್ , ಚಿಮ್ಮಿದಾ ಪರಿ ಏನು ?
ಬರಿ ಬೆಡಗು ನನಗಿನ್ನು; ಕುಬ್ಜ ನಾನು !!



ವರುಷ ಎಷ್ಟಾಯ್ತೆಂದು ಯಾರು ಕೇಳಿದರಿಲ್ಲ ,
ನನಗೋ ದಿನವೆಷ್ಟೆಂದು ಕೇಳುವರು ಎಲ್ಲಾ!
ಅಪರೂಪಕ್ಕೋ ಏನೋ ನಮ್ಮಲ್ಲೂ ಒಬ್ಬ ನಿನ್ನಂತೆ!
ಬಾಹುಬಲಿಯಾದನವ; ನಾವ್ ಮಾತ್ರ ಬೆತ್ತಲೆ !


ನಿನ್ನ ಫಲ ಕೈಯಲ್ಲಿ , ನಾವು ಕತ್ತರಿಯಲ್ಲಿ !
ಉತ್ತರಿಸದಿಹ ಪ್ರಶ್ನೆ ಇನ್ನು ನೂರಾರು !
ನೋಡೋಣ ಮುಂದೆ ; ಈಗ ಬಣ್ಣದ ಲೋಕ 
ಕತ್ತಲಾದಂತೆ ಎಲ್ಲವೂ ಕಪ್ಪೇ !!


ಈಶ್ವರ ಭಟ್ "ಕಿರಣ"
೧೩/೦೧/೨೦೧೧