ಓ ಕವಿಯೆ, ಪ್ರಕೃತಿ ಪ್ರೇಮಿಯೆ ನೋಡು
ನೀರಿಲ್ಲಿ ಹರಿಯುವುದೆ ಹಾಲಿನಂತೆ ?
ನಿಲ್ಲಿಸು ನಿನ್ನ ಅರಚಾಟ ಕಿರುಚಾಟ
ನೀರೆ ಇರದಿರೆ ಏಕೆ ಹಾಲ ಚಿಂತೆ ?
ನಿನ್ನ ಆಭಾಸಕ್ಕೆಲ್ಲ ಉತ್ತರಿಸುವುದ್ಯಾರು
ಹಾಲು ನೀ ಹುಡುಕು ನನಗೆ ಬೇಡವಿಲ್ಲಿ !
ಮುನಿದು ಮೈಯ್ಯನು ಮುಚ್ಚುವಾಟವು ಬೇಡ
ಎಳೆಯುವುದು ನಿನ್ನ ಕೈ ಸೆರಗನಿಲ್ಲಿ
ಮೂಕವದು ಭಾವಗಳು ಎಂದೆಲ್ಲ ಒದರದಿರು
ಭಕ್ತಿ ಪ್ರೀತಿಗಳೆಲ್ಲ ನಿನ್ನ ಒಳಗೆ !
ನಿನಗೆ ನೆಪ ಬೇಕೆಂದು ಬರೆವ ತೆವಲು ಇದಲ್ಲ
ಕಣ್ಣೀರು ಕರಗುವುದೆ ಜೇನಿನೊಳಗೆ ?
ಬತ್ತಲಲಿ ಕತ್ತಲಲಿ ಬರಿಯ ಬಟ್ಟಲಲೆಲ್ಲಾ
ನೀ ಬರೆವ ಘನತರದ ಕಾವ್ಯ ಕವನ !
ಇದರ ಮೇಲೊಂದಿಷ್ಟು ಕಸವೊ ಬೆಂಕಿಯೊ ಹಾಕಿ
ಮತ್ತೆ ತೋರುವುದೇನು ನಿನ್ನ ಜತನ ?
ಸಾಕು ಕವಿ , ನೀನೆ ಗುರು ! ದೈವ ನಮಗೆ
ಬರೆಯದಿದ್ದರು ಕೊಡಿಸು ಸ್ವಲ್ಪ ಬೆಲ್ಲ!
ಮತ್ತೆ ಕೊಪ್ಪರಿಗೆ ಚಿನ್ನ ನಾನು ಕೇಳುವುದಿಲ್ಲ
ಉತ್ತರಿಸು ಪ್ರಶ್ನೆಗಳ ಬರಿಯ ಕನಸು ಅಲ್ಲ !
೩೦-೦೮-೨೦೧೧