Friday, June 29, 2012

ಕಾಯುವುದು ನಿನಗೆ ನಾ, ಬೇಯುವುದು ನೆನೆದು ನಾ

ಕಾಯುವುದು ನಿನಗೆ ನಾ, ಬೇಯುವುದು ನೆನೆದು ನಾ
ನೋಯುವುದು ಸರಿಯೆ ನಾ, ಹೇಳು ನೀನು
ನಿನ್ನ ಕನಸನು ಹೊತ್ತು, ಅವಕೆ ಆಸರೆಯಿತ್ತು
ಅದಕಿಷ್ಟು ಮೆರುಗು ನಾ ತುಂಬುತಿಹೆನು

ನಿನ್ನ ಜೊತೆಯಿರೆ ನಾನು ಬೆಟ್ಟಗಳ ಕುಣಿಸುವೆ
ಕಾಲುದಾರಿಗೆ ಹೂವ ಚೆಲ್ಲಬಲ್ಲೆ!
ಬರದೆ ಹೋದರೆ ನೀನು, ಇವು ಎನ್ನ ಕೆಣಕುವುದು
ಹೇಗೆ ನಾ ಏಕಾಂಗಿ ನಡೆಯಬಲ್ಲೆ?

ಹುಚ್ಚುಹಿಡಿಸುವ ನಗುವು;ಮಳೆಗರೆವ ಮಾತಿನೊಳು
ನನ್ನಂತರಂಗವನು ತುಂಬಬಲ್ಲೆ
ನಿನ್ನ ಸಾಮೀಪ್ಯದೊಳು ಪರಿಪೂರ್ಣ ನಾನೀಗ
ಎದೆಯ ಆನಂದಕ್ಕೆ ಇಲ್ಲ ಎಲ್ಲೆ

ಒಲವದೇನೆಂದು ಅರಿತು ನಾ ಹೇಳುವುದೆ?
ಪದದಿ ಭಾವದ ಸಾರ ತುಂಬಬಹುದೇ?
ನಿನ್ನ ಸಂಗವೆ ಒಲವೆ? ನೀನು ಇರದಿರೆ ಒಲವೆ?
ಮೋಡಗಳ ತೆರದಲ್ಲಿ ಹೊಂಚುತಿಹುದೇ?

೩೦-೦೬-೨೦೧೨

Monday, June 25, 2012

ಹೀಗೇಕೆ


ಅಮ್ಮ ಹೀಗೇಕೆ,
ಇಷ್ಟು ಹೆತ್ತರೂ , ಕರೆಗಾಳಿ ಗೀರಿದರೂ
ತೊಗಟೆಯಿಂದೊಡೆವ ಮಕ್ಕಳು
ನಿನ್ನ ಹಳದಿ ಎಲೆಗಳನ್ನ ನೋಡಿ ಕನಿಕರಿಸುವುದಿಲ್ಲ.

ಅವನು ಗಾಳಿ,
ಎಷ್ಟೊ ಮರಗಳ ಮೈದಡವಿ ಹೋದರೂ
ಮುಪ್ಪಿಲ್ಲವಂತೆ.
ಹೆತ್ತ ಹೆಂಗಳೆಯಂತೆ ಮೈಯ್ಯೂ ಸುಕ್ಕುಗಟ್ಟುವುದಿಲ್ಲ
ಜಂಭ ಅವಗೆ!

ಹೀಗೇ, ತಿರುತಿರುಗಿ, ಕೊನೆಗೆ
ಮನೆಯ ಬಾಗಿಲು ತಟ್ಟೆ
ಹಿತ್ತಿಲಿನ ಬಾಗಿಲು ಮುಚ್ಚಿದಂತೆ ಅನಿಸಿ
ಗಾಬರಿಗೊಂಡಿದ್ದೇನೆ.

ಅನ್ನದಾತನ ನೆನೆಯುತ್ತಾ!

ಅನ್ನದಾತನ ದಿನವು ನೆನೆಯಿರಿ, ನೆನೆಯುತ್ತಾ ಇರಿ
ಬರೀ ನೆನೆದರೆ ಸಾಕು! ಜಪಿಸುತ್ತಿರಿ ಆಗಾಗ 
ಒಂದು ಹೊತ್ತಿನ ಊಟ, ಅಲ್ಲ ಹನಿ ನೀರು 
ಕೊಟ್ಟು ಬಿಡಬೇಡಿ ಬಳಿಗೆ ಬಂದಾಗ.

ಬಸ್ಸು ಟ್ರೈನುಗಳ ಹತ್ತಿಯಾರಿವರು !
ನೋಡಿಕೊಳ್ಳಿ ನಿಮ್ಮ ಬಿಳಿ ಷರಟು ಪ್ಯಾಂಟು!
ಕೊಳೆಯಾಗದಂತೆ ದೂರ ತಳ್ಳಿಬಿಡಿ,
ಹಿಡಿದುಕೊಳ್ಳಿ ಕಿಟಿಕಿಯ ಬದಿ ಸೀಟು !

ರಸ್ತೆಯಲ್ಲಿ ಉಗುಳಬೇಡಿ, ಸಿಪ್ಪೆಯ ಎಸೆಯಬೇಡಿ
ಎನ್ನಿ. ಅವರೇನು ನಾಗರಿಕರೇ ? ಅಲ್ಲ !
ನಿಮ್ಮ ಪ್ಲಾಸ್ಟಿಕ್, ಕಂಪ್ಯೂಟರುಗಳ ಗ್ರಹಿಸರು
ನಮ್ಮಿಂದ ಉದ್ದಾರ ತಾನೆ ಎಲ್ಲ !

ಎತ್ತರಕಟ್ಟಿದ ಮಹಲಿನ ಮೇಲಿಂದ ಬೆಟ್ಟಗುಡ್ಡಗಳ ಹಿಡಿದು
ನೀರು ಹರಿವಲ್ಲೆಲ್ಲಾ ಕ್ಯಾಮೆರದಲಿ ಬಡಿದು
ಬಗ್ಗಿದ ರೈತನ ಹೊಗಳಲೋಸುಗ ಬಾಯಿ ಮುಚ್ಚಿಸಿ
ಕೆಂಪು ಹಲ್ಲು, ಕಂಡೀತೆಂದು ಬಾಯಿಯೊಡೆದು !

ಛೇ, ನೀನೇ ಬೆಳೆಯಬೇಕೆಂದಿಲ್ಲ ಗೋಧಿ. ಇದೆ ದಾಸ್ತಾನು
ವೀರ್ಯದ ಲೆಕ್ಕವೂ ಇದೆ ನನ್ನಲ್ಲಿ, ಎಷ್ಟು ಹುಟ್ಟಿಸಬೇಕು?
ಮುಕ್ಕಾಲು ಪಟ್ಟಣದೊಳಗೆ ,ಕಾಲು ಗದ್ದೆಗೆ ಇಹುದು
ಕಾಲು ಬೆಳೆಸಲು ಬೇಕು ! ಉಳಿದ ಪರಾಕು !

Saturday, June 23, 2012

ಒಂದಿಷ್ಟು ಸತ್ಯ


ಅಲ್ಲೆಲ್ಲೋ ಅಡಗಿದ್ದ ಬೆಂಕಿಯನ್ನು ತಿಂದು
ಕಲ್ಲಿದ್ದಲು ಮಾಡಿದ ನಿನ್ನ ತಾಕತ್ತನ್ನು
ಸುಳ್ಳು ಎನ್ನಲಾರೆ!

ನಿಲ್ಲು! ಒಂದಿಷ್ಟು ಪರಮಾನ್ನವೋ
ಅಲ್ಲ ಪಾಯಸವೋ ಕಟ್ಟಿಕೊಟ್ಟು
ಗಂಟಲಿಗೇರುವ ಉಪ್ಪಿನಕಾಯಿಯ ಗುಟ್ಟು
ಬಿದ್ದಲ್ಲಿಗೇ ಒಂದು ಕೋಪದ ಏಟು
ಇನ್ನೊಂದು ಬೀಳುವಾಗೊಮ್ಮೆ ನೀ ಇತ್ತ ಸಾರೋಟು!
ಮರೆಯಲಾರೆ.

ಚೆಲ್ಲಿದ ಚಿಲ್ಲರೆ ಕಾಸು, ಬಳೆಯ ಚೂರು
ಬಾಳೆ ಹಣ್ಣು, ಮತ್ತೇನೌಷಧಿಯ ತೊಗಟೆ!
ಮಳೆಯ ದಿನದ ಕತ್ತಲಲ್ಲಿ
ಎಲ್ಲವನ್ನೂ ಮೆಟ್ಟಿ ಜಾರಿ ಬಿದ್ದಾಗ
ಈ ಕಾಸು, ಸಿಪ್ಪೆ, ಚೂರುಗಳನ್ನ ಆಯಲಾಗದೇ
ಎಲ್ಲವೂ ಮಣ್ಣು ಎನ್ನಲಾರೆ.

ಕಿಲುಬಿಗಂಟಿದ ಮಣ್ಣು ತೊಳೆದುಕೊಡು,
ಬಾಳೆಯ ಪುಳ್ಳೆಗಳನ್ನ ಪೊರೆವಂತೆ ಮಾಡು
ತೊಗಟೆ ಜಾರದ ಹಾಗೆ ಕಟ್ಟು ಕಾವಿಯ ಪಂಚೆ!
ಗೀರುತ್ತಿರಲಿ ನಿನ್ನ ಹದಿಬದೆಯ ಬಳೆಯ ಚೂರು.