Monday, November 26, 2012

ಇನ್ನೆಷ್ಟು ಕಾಲ ಕಾಯಬೇಕೇ?


ಇನ್ನೆಷ್ಟು ಕಾಲ ಕಾಯಬೇಕೇ
ಜೊತೆಗೆ ನಡೆಯಲು?
ಒಂಟಿಯಾಗಿ ಸವೆಯಬೇಕೇ
ನನ್ನ ದಿನಗಳು?

ಉಳಿಸಿ ಹೋದ ಮಾತುಗಳಲಿ
ಕತೆಯು ಬದುಕಿದೆ
ಮೌನ ಆಳೋ ಸಮಯದಲ್ಲಿ
ನೋವು ಕೆದಕಿದೆ.

ಎಲ್ಲೊ ಅರಳಿ ಎಲ್ಲೊ ಹೊರಳಿ
ನಗುವು ಬಳಲಿದೆ
ಇನ್ನೂ ಕಾಲ ಒದಗಲಿಲ್ಲ
ಎನುತ ಒಣಗಿದೆ.

ಕಾಯುವುದೋ ನೋಯುವುದೋ
ಏನೋ ಅರಿಯೆನು
ನಿನ್ನ ಒಳಗೇ ಹರಿಯುತಿರುವೆ
ಎಂದುಕೊಳುವೆನು.

ಚಿತಕೃಪೆ : ವೆಂಕಟ್ ಕೋಟೂರ್
(ಒಂದೇ ಹೆಜ್ಜೆಯ ಗುರುತು)

Friday, November 9, 2012

ಆಲದ ಮರ ಹೇಳಿದ ಕತೆ.


"ನಿನ್ನೆ ಹಂಪಿಯ ಬಳಿಯ ರಸ್ತೆಯಲ್ಲಿ
ಆಲದಾ ಮರದ ಬಳಿ ಜೊಂಪಿನಲ್ಲಿ.
ಬಿಳಲು ಹೇಳುವ ಕತೆಯ ಕೇಳುತಿದ್ದೆ
ಮೋಹ ಬಿಟ್ಟೆನು ಅಲ್ಲೆ, ಬೆವರಿ ಒದ್ದೆ!

ನನಗೋ ವಯಸಿಷ್ಟು ಹೇಳಲಾರೆ
ಬುಡದಲ್ಲಿ ಏನುಂಟೋ ತಿಳಿಯಲಾರೆ
ಜೊತೆಗೆ ಬಂದವರೆಲ್ಲ ಹೋದರೆಂದೋ!
ನಾನು ನಿಂತಿದ್ದೇನೆ, ಸಾಯಲಾರೆನೆಂದೋ?

ಈನಾಡನಾಳಿದವ ಇಲ್ಲೆ ಇದ್ದ
ಬಾಲ್ಯದಲಿ ಇದೆ ಬಿಳಲ ಎಳೆಯುತಿದ್ದ
ಕತ್ತಿ ಕೈಯ್ಯಲಿ ಕರೆಯೆ, ನನ್ನ ಬಿಟ್ಟೋಡುತಲೆ
ಬಂದ ಕಣ್ಣೀರನ್ನು ಒರೆಸಿ ನಡೆದ.

ಹತ್ತೋ ಹದಿನೈದೋ ಅವಗೆ, ರಾಜ್ಯವಿತ್ತು
ಹೂ, ಫಲವ ಬಿಡದುದಕೆ ಬಂತು ಕುತ್ತು!
ಸುಭೀಕ್ಷವೆಂದದರ ಕರೆದರೆಲ್ಲಾ
ನಾನೆಂತೋ ಬದುಕುಳಿದೆ! ಸಾಯಲಿಲ್ಲ!!

ಹೀಗಿರಲು ಒಂದೊಮ್ಮೆ ಯುದ್ಧವಂತೆ
ಇಲ್ಲಿಗೂ ಅಲ್ಲಿಗೂ ಕತ್ತಿ ಬಾಣ ಸಂತೆ
ಕೋಟೆ ಒಡೆದರು;ಇರಲಿಲ್ಲವಂತೆ ಸಂಧಿ
ಉಳಿದದ್ದು ಬರಿ ಅಂತಃಪುರದ ಮಂದಿ.

ಏನಾಯ್ತು ಗೊತ್ತೇನು ಬೆಳಗು ಜಾವದಲ್ಲಿ
ಕತ್ತಿಯೇಟಿಗೆ ಬಿದ್ದ ಕೊರಳು ಇಲ್ಲಿ,
ನೀ ಜೋತು ಬಿದ್ದಂತ ಬಿಳಲು ಗೂಡು
ಇನ್ನು ನೆತ್ತರು ಕಲೆಯು ಇಹುದು ನೋಡು.

ಹೀಗೆ ಹೇಳಿದ ಕತೆಯ ಕೇಳಿದವರು
ಕಡಿದರೆನ್ನಯ ಬಿಳಲು, ಕ್ರಾಂತಿಯವರು
ನೀನು ಕಡಿವೆಯ ಹೇಳು ನನ್ನ ಬಿಳಲು?
ಬಿಳಿಯ ಮೇಣವೆ ಸಾಕ್ಷಿಗೆನ್ನ ಅಳಲು!"


ಕವನವನ್ನು ಮೀರಿದ ಚಿತ್ರ: ವೆಂಕಟ್ ಕೋಟೂರು.
http://www.facebook.com/venkat.raj.184

Friday, November 2, 2012

ಹನಿಗವನಗಳು- ಒಂದು


"ಒಂದಿಷ್ಟು ನಗೆಯೆನಗೆ ಬಿಟ್ಟು ಹೋಗೇ ಗೆಳತಿ
ಸತ್ತಾಗ ಕಣ್ಣು ನೋಡದು, ಕಿವಿಯೂ ಇರದು
ಬರಿಯ ಎಲುಬು ಮತ್ತೆ ಹಲ್ಲುಗಳು ಉಳಿದೀತು!"
-----------------------------------------------------
"ಹಾರಿ ಹೋಯಿತು ಹಕ್ಕಿ
ಕೊಂಬೆಯ ಮೇಲೆ ಹಕ್ಕಿಯ ಗುರುತು ಇರಲಿಲ್ಲ.
ಮಂಗ ನೆಗೆಯಿತು,
ಕೊಂಬೆ ಮುರಿದು ತಣಿಯಿತು."
-----------------------------------------------------
ಕನ್ನಡಕ್ಕೆಂದು ನೀ ಕೊಲೆ ಮಾಡಬೇಕಿಲ್ಲ
ಕನ್ನಡವ ಕಂಡೊಡನೆ ನಲಿದಾಡು ಸಾಕು.
ಕನ್ನಡದಿ ಮಾತಾಡು, ಕನ್ನಡದಿ ನೀನಾಡು
ಕನ್ನಡವನುಳಿಸಲು ಬೇರೇನು ಬೇಕು?
-----------------------------------------------------
"ಯಾವತ್ತೂ ಹಿತವಾಗಿ
ರೋಮಾಂಚಿತನನ್ನಾಗಿಸಿ
ನಗುತ್ತಾ ಸ್ವಾಗತಿಸುವವಳು ಒಬ್ಬಳೇ
ನಿದ್ರಾದೇವಿ."
-----------------------------------------------------
"ಪ್ರತಿಪುಟದಲ್ಲೂ ಒಂದು
ವಿರಾಮ ಬೇಕೆಂದು ಬಯಸುತ್ತೇನೆ.
ವಿರಾಮದ ಮೊದಲು ಬರೆಯುವುದೇನು?
ತಿಳಿದಿಲ್ಲ!."
-----------------------------------------------------
"ಕೆಲವು ಬಣ್ಣಗಳು ಹೀಗೇ
ಗಾಢವಾಗುತ್ತಾ ಕಾಡುತ್ತವೆ.
ಕೊನೆಗೆ
ಕಪ್ಪು ಎಂದೇ ಅನಿಸುತ್ತದೆ."
-----------------------------------------------------
"ಸೋತು ಬರೆಯುವ ಚಟ ನಿನಗೆ
ಎಂದು ಜರೆಯದಿರು
ಗೆದ್ದಾಗ ಸಂಭ್ರಮಿಸುತ್ತೇನೆ
ಬರೆಯಲಾಗುವುದಿಲ್ಲ."
-----------------------------------------------------
"ಬರೆದರೆ ನೋವು ಮಾಯವಾಗುತ್ತದೆ ಎಂದು
ದೊಡ್ಡ ಅಕ್ಷರದಲ್ಲಿ ನೋವು ಎಂದು ಬರೆದ.
ಕಣ್ಣಾಲಿಗಳಲ್ಲಿ ತುಂಬಿದ್ದ ನೀರು ಬಿದ್ದು
ಅಕ್ಷರ ಅಳಿಸಿದಂತೆ ಭಾಸ."
-----------------------------------------------------
"ಸಖೀ,
ನೀ ಬಂದ ದಾರಿ ಬೇರೆ
ನನ್ನ ದಾರಿಯೂ ಬೇರೆ
ಎಂದಾದರೂ ದಾರಿಗಳು ಸೇರಿದರೆ
ಜೊತೆಯಾಗಿ ಸಾಗೋಣ
ಇಲ್ಲವೇ
ಹೀಗೆಯೇ ಹೋಗೋಣ."
-----------------------------------------------------
"ಹತ್ತು ಕಡೆ ಕಣ್ಣು ಹಾಯಿಸಿದರೂ
ನಗುವವರು ಸಿಕ್ಕಿಲ್ಲ.
ನಾನು ನಗುತ್ತಿದ್ದೆ
ನಗದವರೆಲ್ಲ ಸೇರಿಕೊಂಡು
ನನ್ನನ್ನು ಹುಚ್ಚ ಎಂದರು."
-----------------------------------------------------
"ಚುಕ್ಕಿಯಿಟ್ಟದ್ದನ್ನು
ನೇರ ನೋಡಲಿಲ್ಲ
ಬಿದ್ದು, ವಿಮರ್ಶೆ ಮಾಡುತ್ತಾ ನೋಡಿದೆ
ಅದುವೇ
ನಮ್ಮಿಬ್ಬರ ನಡುವೆ ಗೆರೆಯಂತಿದೆ ಈಗ."
-----------------------------------------------------
"ನಿನ್ನ ನೆನೆಯುತ್ತಾ
ನಿದ್ದೆಗೆ ಜಾರುವಾಸೆ ನನ್ನದು
ಎಚ್ಚರವಾಗದಿರಲಿ ನಾಳೆ
ಎಂದು ಹಾರೈಸಿಬಿಡು."
-----------------------------------------------------
"ಹುಣ್ಣಿಮೆಯನ್ನು ಅವ ದ್ವೇಷಿಸುತ್ತಾ ಕಳೆದ!
ಕಳೆದ ಹುಡುಗಿಯ ಮುಖ
ನೆನಪಾಗುವುದೆಂದು,
ಚಂದ್ರನನ್ನು ಪೂರ್ಣ ನೋಡಲಾರೆ ಎಂದ."
-----------------------------------------------------
"ನಿದ್ದೆಗೆ ಜಾರುವಾಗ ಮತ್ತು ಬೆಳಗ್ಗೆ ಏಳುವಾಗಷ್ಟೇ
ಕೆಂಪಾಗಲು ನಾ ಸೂರ್ಯನಲ್ಲ!
ನೋವಿಗೂ ನಲಿವಿಗೂ ಕೆಂಪಾದೀತು ಕಣ್ಣು."
-----------------------------------------------------
"ಸಂಪಿಗೆ ಗಿಡ ನೆಟ್ಟದ್ದಕ್ಕೆ ಹೂವಾದೀತು
ಮಲ್ಲಿಗೆ ಬಳ್ಳಿ ಊರಿದ್ದಕ್ಕೆ ಹೂವಾದೀತು
ನಿನ್ನೊಲವಿನ ದಾರಿಯಲ್ಲೇ ಕಾದಿದ್ದೇನೆ
ಖಂಡಿತ ಬರದಿದ್ದರೆ ನೋವಾದೀತು!"
-----------------------------------------------------
"ಕಣ್ಣು ತೋರಿದ್ದಕ್ಕೆಲ್ಲಾ ಸರಿ ಎನ್ನಲಾರೆ!
ಸುಣ್ಣ ಕಂಡಿತು; ಹಚ್ಚಿದೆ
ಹೆಣ್ಣು ಕಂಡಿತು; ಮೆಚ್ಚಿದೆ
ಮಣ್ಣು ಕಂಡಿತು ಈಗ ಬೆಚ್ಚಿದ್ದೇನೆ."
-----------------------------------------------------
"ನಿನ್ನ ನೆನಪುಗಳೆಲ್ಲ ನನಗೆ ಗೌಣ
ಎಂದಾಗ ಕೋಪಿಸಬೇಡ,
ಲೆಕ್ಕಿಸದಿದ್ದಾಗಲೇ
ನೋವು ವಿಪರೀತ ಕಣಾ!"
-----------------------------------------------------
"ಮಳೆ ಹನಿ ಬಂತೆಂದು ಖುಷಿಗೊಂಡು
ತಲೆ ಎತ್ತಿದ!
ಮಳೆ ನಿಂತಿತು,
ತಲೆ ತಗ್ಗಿಸಿದ."
-----------------------------------------------------
"ಹಸಿ ಹಸಿ ಗಾಯ
ಕೆರೆದ ಮೇಲೆ
ನಾಳೆ,
ಪುನಃ ತೊಗಟೆ ಕೆರೆಯಬೇಕು
ಎನ್ನುವ ವಿಚಿತ್ರ ಸಮಾಧಾನ."
-----------------------------------------------------
"ಸಂಪೂರ್ಣ ಖಾಲಿಯಾಗಿದ್ದೇನೆ
ಬಂದು ತುಂಬಿಕೊಳ್ಳುವುದು.
ಏಕೆಂದರೆ, ಖಾಲಿಯಾದಾಗ
ನೋವು ತಬ್ಬಿಕೊಳ್ಳುವುದು."
-----------------------------------------------------
"ನಾನು ಕಬ್ಬನ್ನು ತಿಂದೆ
ಸಿಹಿಯಾಗುತ್ತಿದ್ದೇನೆ.
ಅಗಿದು ಉಗುಳಿದ ಸಿಪ್ಪೆ
ಮೂದಲಿಸುತ್ತಿದೆ
ನಾಳೆ ಒಣಗುತ್ತೇನೆಂದು."
-----------------------------------------------------
"ಶಿಕಾರಿಗೆ ಹೊರಟವನಿಗೆ ಸಿಕ್ಕಿದ್ದು
ಅವನದೇ ಪೂರ್ವಜರ ತಲೆಬುರುಡೆ
ಹಾಗೆಯೇ
ಬರೆದವನಿಗೆ ಸಿಕ್ಕಿದ್ದು
ಬೇರೆಯವರು ಬರೆದುದುದರಲ್ಲಿ
ಹೇಳಲಾಗದೆ ಉಳಿಸಿದ್ದು."
-----------------------------------------------------
"ಸಿಗರೇಟು ಸೇದಿದ,
ಕೆಮ್ಮಿದ,
ಉಗುಳಿದ.
ಎಂಜಲು ಹೃದಯದಾಕಾರದಲ್ಲಿ ಬಿದ್ದಿತ್ತು!"
-----------------------------------------------------
"ಬುಗುರಿ ಮರ ಕಂಡಾಗ,
ಬೆಳಗ್ಗೆ ನೋಡಿದ ಹುಡುಗಿಯ ನೆನಪು!
ಬುಗುರಿ ಮರದಲ್ಲೂ ಹಾಗೇ
ಬೆಳಗ್ಗಿನ ಹಳದಿ ಹೂ
ಸಂಜೆ ಕೆಂಪಾಗಿತ್ತು!"
-----------------------------------------------------
"ನೋವು ನಲಿವು ಬೇರೆಯಲ್ಲ
ನೋವನ್ನು ಬಿಡಿಸುತ್ತಾ ಹೋದಂತೆ ನಲಿವು
ಕಣ್ಣೀರನ್ನು ಒರಸುತ್ತಾ
ಮುಖಕೆ ಕನ್ನಡಿಯ ಹೊಳಪು!"
-----------------------------------------------------
"ನಿನ್ನನ್ನು ಎತ್ತರಿಸುತ್ತಾ ಸಾಗುವಾಗ
ನನ್ನ ನೆರಳು
ಉದ್ದವಾಗುತ್ತಿದೆಯೆಂದು ನಂಬಿಕೆ.
ನಾನಲ್ಲ ಉದ್ದವಾಗುವುದು,
ವಾಸ್ತವ."
-----------------------------------------------------
"ಅಮ್ಮಾ ಕತ್ತಲಾಯಿತು,
ಬೆಳಗ್ಗಿನ ತಂಪಿನ, ಮಧ್ಯಾಹ್ನದುರಿಯ, ಸಂಜೆಯ ಕೆಂಪಿನ
ಆಹಾರ
ಕತ್ತಲ ಹಸಿವೆಯಲ್ಲಿ ಸವೆದು ಹೋಯಿತು!
-ತಗೋ ಮಗನೇ
ತಿಂಗಳ ರೊಟ್ಟಿ."
-----------------------------------------------------
"ರಾಮನನ್ನು ಕಾಡಿಗಟ್ಟು
ರಾಜ್ಯವಾಳುವಾಸೆಯಿಟ್ಟು
ಎಂದ ಮಂಥರೆ
ಮಾತುಗಳನ್ನು ನಡೆಸಿದ್ದಕ್ಕೆ
ಭರತ ಖತಿಗೊಂಡು, ಅವಳ ಹೊರಗಟ್ಟಿದ.
ಇಲ್ಲಿ ಮಹಿಳೆಯ ಶೋಷಣೆಯೆಂದು
ಪರವೂರಿನ ಮಹಿಳೆಯರು
ಸೇರಿದ್ದಾರೆ.
ಭರತನಿಗೂ ರಾಜ್ಯವಿಲ್ಲ
ರಾಮ ರಾಜ್ಯದಲ್ಲೇ ಇಲ್ಲ
ಬೆನ್ನುಬಾಗಿದ ಮಂಥರೆಯ ಪ್ರತಿಮೆ
ಇಡಬೇಕೆಂದು ಆಗ್ರಹಿಸಿದ್ದಾರೆ."
-----------------------------------------------------
"ಕಪ್ಪು?.. ನೀಲ
ಮುರಳೀಲೋಲ
ಹಗಲು ಗೊಲ್ಲ
ರಾತ್ರಿ ನಲ್ಲ!"
-----------------------------------------------------
"ನಿಶೆಯೇರಿ ಹೋದಂತೆ,
ಮಳೆಹನಿ ಮೆಲ್ಲನೆ ಚುಚ್ಚುವಂತೆ,
ಅವಳು!
ಕಪ್ಪಾಗುತ್ತಾ ತಂಪೀಯುವಳು!"
-----------------------------------------------------