Wednesday, January 30, 2013

ನಾನು ಉಳಿಸಿಕೊಂಡದ್ದು!


ನನ್ನಿಂದ ದೂರಾಗಿ ಹೋದವರು ಯಾರಿಲ್ಲ
ನಾನಾಗಿ ದೂರಕ್ಕೆ ನಡೆದು ದಣಿದೆ.
ಬಂದ ದಾರಿಯ ಮತ್ತೆ ನೋಡಲಾಗುವುದಿಲ್ಲ
ನೆನಪುಗಳ, ನೋವುಗಳ ತುಳಿದು ಬಂದೆ.

ಕರೆಯದಿರಿ ನನ್ನನ್ನು ನಿಮ್ಮ ಹಿರಿತನದೊಳಗೆ
ನನ್ನ ಸಣ್ಣನೆ ಬದುಕು ತುಂಬದಲ್ಲಿ!
ಬೆಳಕಾದರೂ ನೀವು, ನನಗೆ ಕತ್ತಲೆ ಬೇಕು
ಬದುಕು ಸುಖಿಸಲಿ ನಿಮ್ಮ ಬೆಳಕಿನಲ್ಲಿ

ಜಗವು ಕಲಿಸಿದೆ ನನಗೆ ನೋವುಗಳ ನಗಿಸಲು
ನಕ್ಕು ಉಗುಳಲು ದ್ವೇಷ ಕಿಚ್ಚುಗಳನು
ಎಲ್ಲಿಯೋ ಕಾಣುವುದು ನನ್ನ ಬಾಳಿನ ಒಲುಮೆ
ಯಾವುದೊ ಲತೆಗಳಲಿ ಹೂವುಗಳನು

ಆ ದಿನಕೆ ಕಾಯುವೆನು ಹೊಣೆಯ ಬೆನ್ ಬಾಗಿದರು
ಹಿಡಿಯಲಾರೆನು ಮುಳ್ಳು ಊರುಗೋಲು!
ಎದೆಯ ಒಳಗಡೆ ಉರಿವ ಆ ಆತ್ಮವಿಶ್ವಾಸ
ಬರಿಸಲಾರದು ನನಗೆ ಎಂದು ಸೋಲು.

Monday, January 28, 2013

ಮಲ್ಲಿಗೆಯ ಜೊತೆಗೆ


ನಿಶೆಯ ಮಂಪರಿನೊಳಗೆ ಬಿದ್ದ ಸೂರ್ಯನ ಕಣಕೆ
ಮಲ್ಲೆ ಮೈಮುರಿದೆದ್ದು ಅರಳಿತೇನು?
ಅರಳಿ ಹೊರಳಿದ ಮಲ್ಲೆ ನನ್ನವಳ ಕರೆದಂತೆ
ಎದ್ದು ಹೊರಟಲು ಅವಳು ಯಾಕೊ ಏನೊ!

ಅಚ್ಚಬಿಳಿಯದು ಚೆಲುವು ಪಚ್ಚೆಲತೆಯೊಳು ಬಳುಕಿ
ಮುತ್ತಿಟ್ಟು ನಿಂತಿತ್ತು ಒಂದು ಘಳಿಗೆ!
ನನ್ನವಳು ಬಂದವಳು ಹೂ ಕಂಡು ನಕ್ಕವಳು
ತಲೆಯ ತುರುಬನು ನೋಡಿ ಬಂದಳೊಳಗೆ.

ಇಂದೇಕೋ ಮಲ್ಲೆ ಹೂ ಮುಡಿಸಿಲ್ಲ ಎಂದೆನುತ
ನನ್ನವಳು ಮುನಿಸನ್ನು ತೋರಬೇಕು
ಮಲ್ಲಿಗೆಯ ಹೂಗಳನು ಪ್ರೀತಿದಾರಕೆ ಹೆಣೆದು
ಅವಳ ಬಳಿ ಕರೆದು, ನಾ ಮುಡಿಸಬೇಕು,

ಒಂದು ದಿನದಲಿ ಅರಳಿ ನನ್ನವಳ ಜೊತೆಮಾಡಿ
ಪ್ರೇಮ ಹೂವಾದಂತೆ ಅಲ್ಲವೇನು?
ಅದೆ ಸಂಜೆ ಬಾಡಿತ್ತು; ಬದುಕು ಮುಪ್ಪಡರಿತ್ತು
ರಾತ್ರಿ ತಾರೆಯತೇರು ಸೇರಿತೇನು?

೨೮-೦೧-೨೦೧೩

Saturday, January 26, 2013

ಮೈಸೂರು ಮಲ್ಲಿಗೆಯ ಕವಿಗೆ ಅರ್ಪಣೆ.


ಓ ಹಿರಿಯ ಕವಿವರ್ಯ; ನೀನು ಮಲ್ಲಿಗೆ ತಂದೆ
ಅದನೆ ನಂಬುತ್ತಿರುವೆ ನಾನು ಇಂದು
ಕೋಲು ಕಹಳೆಗಳಲಿ ನನಗೆ ಪ್ರೀತಿಯೆ ಇಲ್ಲ
ಬಾಳಪ್ರೀತಿಯೆ ಕವನ ನನಗೆ ಎಂದೂ!

ನೀನೆ ಬೆಳೆಸಿದ ಗಿಡದಿ ಹೂವ ಕೊಯ್ಯಲು ಬಂದೆ
ನೀ ಕೊಟ್ಟ ಮಲ್ಲಿಗೆಗೆ ಸಾಟಿಯಲ್ಲ!
ನೀನೆ ಬೆಳೆದುಕೊ ಎಂದು ಗದರದಿರಿ ನನ್ನನ್ನು
ನಾನೇನು ನಿನ್ನಂತ ಮೇಟಿಯಲ್ಲ.

ನಿನ್ನ ಮಲ್ಲಿಗೆ ಗುರುವೆ, ಮೈಸೂರ ಪೇಟೆಯದು
ನಾನು ನೋಡುವ ಮಲ್ಲೆ ಕಾಡುಗಳದು
ನಾಡುಮಲ್ಲಿಗೆಗಿಂತ ಕಾಡುಮಲ್ಲಿಗೆ ದಂಟು!
ಪರಿಮಳವು ಅತಿಯಲ್ಲ; ಗಟ್ಟಿಯೆಂದು!

ಸುಣ್ಣದುಂಡೆಗಳಂತೆ ಮಲ್ಲಿಗೆಯು ಎಂದವರು
ಬೆಣ್ಣೆಯನು ಮೊದಲೆಂದೂ ಕಾಣಲಿಲ್ಲ!
ಬಣ್ಣಮಾತುಗಳಲ್ಲಿ ಅವರ ಹೊಗಳುವುದಿಲ್ಲ
ಅಣ್ಣ ನೀ ಸರಿ ಎಂದು ಕಾಲ್ಗೆರಗುವೆ.

ನೀ ಬೆಳೆದ ಕಾಲದಲಿ; ಮಲ್ಲಿಗೆಯು ಬಹುಚಂದ
ಈಗ ಬೆಳೆಯುವುದೇನು ಕಷ್ಟ ಬಹಳ
ಗೊಬ್ಬರವನಿಡಬೇಕು; ಬರಬೆಂದ ಮಡಿಲಲ್ಲಿ
ಗಿಡ ಬಾಳಿ ಬದುಕುವುದು ತುಂಬ ವಿರಳ.

ನಿನ್ನ ಕಾಲದಿ ಜನರು ಮಲ್ಲಿಗೆಯ ಕೊಂಡವರು
ಸುಮದ ಚಂದವ ನೋಡಿ ಹೊಗಳಿದವರು.
ಈಗಲೂ ಇದ್ದಾರೆ ವಿಜ್ಞಾನ ಬುದ್ಧಿಯಲಿ
ಎಸಳು ತೆಳುವಾಯ್ತೆಂದು ಹಲಬುವವರು.

ಹಾರೈಕೆ ನಿನದಿರಲಿ; ಚೇತನವು ನನದಿರಲಿ
ಮಲ್ಲೆ ಹೂಗಳು ಎಂದು ಬಾಡದಿರಲಿ
ನನ್ನ ಜೀವನದಲ್ಲು ಹೂವ ನಗೆ ಶಾಶ್ವತವು
ನಿನ್ನ ಕನಸಿನ ತೋಟ ಅಳಿಯದಿರಲಿ.

೨೬-೦೧-೨೦೧೩

Monday, January 21, 2013

ನನ್ನೊಳಗಿನ ನಾನು


ನಡೆಯುತ್ತಾ ನಡೆಯುತ್ತಾ ಓಡುವುದ ಕಲಿತ
ಓಡುತ್ತಾ ಹೀಗಿರಲು ದಾರಿಯನೆ ಮರೆತ.
ವೇದಾಂತ ಓದದೆಯೆ ಗೊಡ್ಡೆಂದು ಜರೆದ
ತಲೆಕೆರೆದು ಚಿಂತಿಸಿದ;ಬಾಳ್ವೆಯನೆ ಹಳಿದ

ಮೂರುದಾರಿಯ ಬಲ್ಮೆ ನಿಂಬೆಮಂತ್ರದ ಮಾಟ
ಸೇರು ತುಪ್ಪದ ತೇಗು; ಕಾಲ್ದಾರಿ ಬೇಟ
ಇಷ್ಟೆಲ್ಲ ದೊರೆತಂದು; ಕಳೆದ ಧಾತುವಿನೊಳಗೆ
ಮತ್ಸರವ ತಾಳಿದನು;ಇತ್ತು ಅರೆಘಳಿಗೆ.

ಹಿಡಿಚೂರು;ಬಿಟ್ಟು ಬಿಡು, ದಾರಬಿಚ್ಚಿಡು ಮಗನೆ
ಬಡಿಮೆಲ್ಲ! ಓಡದೆಯೆ ಹರೆಯಲದು ಕೀಟ.
ತುಂಡರಿಸಿ ರೆಕ್ಕೆಯನು;ನಿನ್ನ ಬಲದಲಿ ಮೇಲ-
ಕ್ಕೇರಿಸುತ ಸಹಕರಿಸು,ಕೊಟ್ಟು ಕಾಟ

ಬೊಮ್ಮನಿಗೊ ಅಮ್ಮನಿಗೊ ಲಲಾಟಬರಹಕ್ಕೂ
ಸುಮ್ಮನೇ ಕಿವಿತುಂಬಿಸಿದ ಗುಗ್ಗುತುರಿಕೆ!
ಕದ್ದ ಮಾತುಗಳಿಗೆಲ್ಲ ಬಿಳಿಯ ಬಣ್ಣವನಿಟ್ಟು
ಮಾರುವುದು ತಾನ್ ಆತ್ಮದುದ್ದಾರಕೆ.

ಭಲೇ ಭೇಷ್ ಎನ್ನುತಲೆ ಬೆನ್ನಿಗಿಟ್ಟರು ಭಾರ
ಸ್ವಂತ ಚಿಂತೆಯ ಮರೆತ ಲೋಕದುದ್ಧಾರ
ನೆರೆಮನೆಯವನ ನರಸತ್ತುದಕೆ ಮದ್ಧು
ಹುಡುಕಿ ಸುಸ್ತಾದದ್ದೆ ಇವನ ಲಾಭ.

ಓಡಿದವ ಸುಸ್ತಾದನೆಂದು ಕೊಟ್ಟರು ನೀರು
ಇತ್ತರವನಿಗೆ ಸುರೆಯ; ವೀರನಾಗು!
ಮತ್ತೆ ಬೈದರು ಹಿಂದೆ ಓಡುತ್ತಿರಲಿ ಮುಂದೆ
ಬಳಲಿದೆಯೋ ಮಗನೆ? ದಾಸನಾಗು.

ಬೊಚ್ಚುಬಾಯಿಗಳಲ್ಲಿ ಅಣಕಿಸಿದ ತುಟಿಗಳಿಗೆ
ಬೆಂಕಿ ಹಚ್ಚುವೆನೆಂದು ಮಾತನಿತ್ತ
ಹಿಂತಿರುಗಿ ಬರಲಾರ, ದೂರದಡವಿಗೆ ಬಂದ
ಸುತ್ತ ಕತ್ತಲೆ ತುಂಬಿ ಮನೆಯ ನೆನೆದ.

ದೊಡ್ಡನೆಯ ಕೆಂಪು ಹಚ್ಚಿದ್ದ ಹಣೆಗಣ್ಣು
ಕರೆದಂತೆ ಕೇಳಿಸಿತು ಅಮ್ಮನೊಲವು
ಕೆನ್ನೆಯಾ ಅರಿಷಿಣಕೆ ರವಿಯು ತೆರೆಸರಿದಂತೆ
ಮಣ್ಣಾಯಿತು ಆಸೆ, ಜೀವ ಕಣವು.

೧೮-೧-೨೦೧೩

Friday, January 18, 2013

ನೆನೆದಾಗ ಕರೆವವಳು, ಚಂದಿರನ ನಗೆಯವಳು


ನೆನೆದಾಗ ಕರೆವವಳು, ಚಂದಿರನ ನಗೆಯವಳು
ಮುನಿಸು ತೋರಿದಳೊಮ್ಮೆ ಸಂಜೆಯಲ್ಲಿ!
ಈ ನಿಶೆಯು ಬಿರುಮೌನ; ಕೊರೆಯುತಿದ್ದವು ಮಾತು
ಮಲ್ಲೆ ಬಿರಿದಿತು ದಿನದ ಬೆಳಗಿನಲ್ಲಿ.

ಬೆಳಗಿನಲೆ ಕಂಡವಳು ಕಪ್ಪು ಮೋರೆಯ ಕಂಡು
ಕೇಳಿದಳು ಬೇಸರದ ಕಾರಣವನು!
ಏನಿಲ್ಲ ಎಂದೆನುತ ಅವಳ ಒಲುಮೆಗೆ ಮಣಿದು
ಅವಳನ್ನೇ ನೋಡುತಲಿ ನಿಂತೆ ನಾನು.

ಕಾರಣವು ಇಲ್ಲದೆಯೆ ಸಿಡುಕಿದರು ನನ್ನವಳು
ಕಾರಣವು ಬೇಡದೆಯೆ ಪ್ರೀತಿಸುವಳು!
ಹೀಗೆನುತ ನಾವಿರಲು; ಮತ್ತೇನು ಬೇಕೆಮಗೆ
ಅವಳಿಗಾಗಿಯೆ ನಾನು ನನಗೆ ಅವಳು.

Thursday, January 10, 2013

ನಿನ್ನ ನೆನೆದರೆ ಸಾಕು ಈಗೀಗ ನನ್ನೊಳಗೆ

ನಿನ್ನ ನೆನೆದರೆ ಸಾಕು ಈಗೀಗ ನನ್ನೊಳಗೆ
ನಿನಗಾಗಿ ಹಾತೊರೆದ ಹಳೆಯ ಸರಕು!
ಕೆಣಕುತಲಿ ಕಾಡುವುದು, ನಿನ್ನನ್ನೇ ಬೇಡುವುದು
ನೆನಪು ಇಬ್ಬನಿಯಂತೆ ತೋಯ್ವ ಬಿರುಕು!

ಎದೆಯೊಳಗೆ ಕೆತ್ತಿಲ್ಲವಾದರೂ ಬಲು ಹೆಸರು
ಮರೆತಿಲ್ಲ ಗೆರೆಗಳನು,ಕೊರೆದವರನು
ಅಂತಹಾ ಗೀಚುಗಳ ಮತ್ತೆ ಫಳಫಳ ಹೊಳೆಸಿ
ಹಾಡಲಾರೆನು ನೋವ ಕತೆಗಳನ್ನು.

ಸೋತೆನೆಂದರೂ ಸರಿಯೆ, ಮತ್ತೇನೂ ಹೇಳೆನು
ಗೆದ್ದೆನೆಂದಾದರೂ ಮಾತು ಬೇಡ,
ಹೀಗೆ ನೋಡುತಲಿರುವೆ ಶಶಿಯ ಕಾಯುತಲಿರುವೆ
ಬರುವನೆಂದಾದರೂ ಸರಿಸಿ ಮೋಡ!

ನಿನ್ನ ನೆನೆದರೆ ಸಾಕು ಈಗೀಗ ನನ್ನೊಳಗೆ
ಹರಿಯುವುದು ಹೊಸತನದ ಒಲವ ನಡಿಗೆ!
ಅದನೆ ಪೋಷಿಸುತಿರಲಿ ಅದನೆ ಬೆಳೆಸುತ ಬರಲಿ
ನಿನ್ನೊಲವೆ ಹರಿಯಲೆನ್ನಾತ್ಮ ಗುಡಿಗೆ.

Tuesday, January 8, 2013

ನಂಬಿದ್ದು-ನಂಬಿದವರು


ಗಿಡದಲ್ಲಿ ಹೂವಿಲ್ಲ, ಹಣ್ಣಿಲ್ಲ ಎಂದೆಲ್ಲ ಮರುಗಿದವ
ಬಂದಿಲ್ಲಿ ನೀರೆರೆದ ನೆನಪು ಇಲ್ಲ!
ಅದಕೆ ಕಟ್ಟೆಯ ಕಟ್ಟಿ ಪೂಜೆ ಮಾಡಿದ ಮಂದಿ
ಹೇಳಿದರು ಆ ಗಿಡಕೆ ಯೋಗವಿಲ್ಲ!

ಮಳೆಗಾಲದೊಳು ಮಳೆಗೆ ಚಿಗುರುಕಟ್ಟಿದ್ದಕ್ಕೆ
ಹರುಷಗೊಂಡರು ಜನರು, ಚಿವುಟಿ ಚಿಗುರ!
ಕಂಡೀತು ಮತ್ತೇನೋ ಎಂದೆನುತ ಕೆರೆಕೆರೆದು
ಹಿರಿದು ಹಿಗ್ಗಿದವರು ಮೆರೆದು ಪೊಗರ!

ನೀರೆರೆಯ ಬಾರೆಂದು ಗೋಗರೆದ ಜನಕೆಲ್ಲ
ಬಿಸಿಲು ಕಾಲದಿ ತೋರೆ ಖಾಲಿ ಕೊಡವು!
ಅದರ ಮಧ್ಯದಿ ನರಕದೊಳು ಹೊಳಲುತಿದೆ
ಗಿಡಕೆ ಸಾವಿನ ಸುಖದ ಬೆವರಿನೊಲವು.

ಗಿಡವು ಹೀಗೆಯೆ ಸ್ವಾಮಿ, ಹೂವಾಗಲಾಗದೆಯೆ
ಹಣ್ಣಾಯಿತು ಹೇಗೋ ಹಿಚುಕಿದಂತೆ!
ನೆತ್ತರನೆ ಒಣಗಿಸಿ, ಅದಕೆ ಗೊಬ್ಬರ ಹೆಸರು!
ಮಾತಲ್ಲಿ ಬದುಕಿತು ನಾಳೆಗಂತೆ!!