Monday, August 18, 2014

ಮತ್ತೆ ದ್ವೈಪಾಯನದಿ..

ಅಂದು ದ್ವೈಪಾಯನದಿ ಮುಳುಗೆದ್ದ ಹಂಸಕ್ಕೆ
ಮೀನಿನಂತೆಯೆ ಕಂಡ ಮಣಿಯ ಮಾಲೆ;
ತರಲದೋ ಮೇಲಕ್ಕೆ ಕಂಡ ಬೆಸ್ತರ ಹುಡುಗ
ಹಂಸ ಬಾಣಕೆ ಗುರಿಯು ವಿಧಿಯ ಲೀಲೆ!
ಮಣಿಯ ಕೊರಳಿಗೆ ತೊಟ್ಟು, ಹಂಸ ಬುಟ್ಟಿಯಲಿಟ್ಟು
ಹುಡುಗ ನಡೆದನು ಮನೆಯ ಜಾಡು ಹಿಡಿದು;
ಮನೆಯ ಒಳಕೋಣೆಯಲಿ ಅಪ್ಪನಿದ್ದನು ಮೌನಿ
ಕತ್ತರಿಸಿ ಹೋದಂತ ಕಾಲನೆಳೆದು!
ಮಾಲೆಯನು ಕಂಡವನು ಒಕ್ಕಣ್ಣು ಅರಳಿಸಿದ
ಹಳೆಯ ನೆನಪಲಿ ತೊಗಲು ಗೊಂಬೆಯಾದ!
ತನ್ನೊಡೆಯ ಕೌರವನ ವರದ ಕಂಠಾಭರಣ
ಮಗನ ಕೊರಳೊಳು ಕಂಡು ಮೌನವಾದ.
ಆ ಯುದ್ಧ ಆ ಸಾವು ಹಿಂಸೆ ಶಾಂತಿಯ ಮಂತ್ರ
ಎಲ್ಲವೂ ಬದುಕಿನಲಿ ಬಂತು ನನಗೆ;
ಕಾಲ ಜಾರಿತು ಹೀಗೆ ಕಾಲಪುರುಷನ ನೆವಕೆ
ಕಾಲುಹೀನಗೆ ಬಂತೆ ಬಲ್ಮೆಯುಡುಗೆ?
ಮಾಲೆ ತೆಗೆದಿರಿಸಿಟ್ಟು ಅಡುಗೆ ಕೋಣೆಗೆ ಸರಿಯೆ
ಹಂಸವಾಯಿತು ಪಾಕ ಎಂದಳಮ್ಮ!
ಮುಳುಗಿದವ ಏನಾದ? ಕೊಂದವನು ಏನಾದ?
ಹಸಿವು ಹೊಟ್ಟೆಯದಲ್ಲ; ನಿಜದ ಬ್ರಹ್ಮ.

~
೧೮-೦೮-೨೦೧೪