Tuesday, July 26, 2011

ಸನ್ಯಾಸಿ ಹರಿವೆ


ನಾನು ಚಿಕ್ಕವನಿದ್ದೆ
ಅಜ್ಜ ಹರಿವೆ ನೆಟ್ಟರು..
ನನಗಂತೂ ಹರಿವೆ ಇಷ್ಟ,
ಬೆಳೆಯುವುದನ್ನೆ ಕಾದೆ.

ಚಿಗುರೆಲೆ ಬಂತು,
ನೀರೆರೆದೆ, ಗೊಬ್ಬರದ ಮೇಲೆಯೇ
ಅಬ್ಬರದ ಬದುಕು
ಅಬ್ಬಾ ಬೆಳವಣಿಗೆ !

ಇನ್ನೂ ಆರೈಕೆ
ಕಳೆಗಳ ತೆಗೆದೆ
ಮತ್ತೆ ಹರಿವೆಯ ರುಚಿ ನೆನೆದು
ಮತ್ತೆ ನೀರೆರೆದೆ.

ಕಾದೆ, ಕೇಳಿದೆ
ಹರಿವೆ ಬೆಳೆದಂತೆ
ಯಾವತ್ತು ಹರಿವೆ ಅಡುಗೆ
ಕಾದಿತ್ತು ಬಾಯಿ ರುಚಿಗೆ !

ಅಜ್ಜ ಕೊಯ್ಯಲೆ ಇಲ್ಲ
ಮತ್ತೆ ಗದರಿದರೆನಗೆ
ಇದು ಸಾಂಬಾರಿಗೂ ಅಲ್ಲ, ಪಲ್ಯಕ್ಕೂ ಅಲ್ಲ
ಮುಂದಿನ ವರುಷದ ಬಿತ್ತನೆಗೆ ಮಗನೆ !

ಹರಿವೆ ಬೀಜ ತೆಗೆದಿಟ್ಟರು
ಅಜ್ಜ ರುಚಿ ನೋಡದೇ ಸತ್ತರು
ಸನ್ಯಾಸಿಯಂತೆ,
ಒಳ್ಳೆಯ ಬೀಜ , ಬಿತ್ತುವ ಹಾಗಿಲ್ಲ ಈಗ !

೨೬.೦೭.೨೦೧೧- ಮಂಗಳವಾರ

6 comments:

  1. ಇದು, ತನ್ನ ಅಂತಃಸತ್ವದಿಂದಲೇ ನನ್ನನ್ನು ಗೆದ್ದ ಕವಿತೆ.

    ತಲೆಮಾರುಗಳ ಸರಪಳಿಯನ್ನು ಬೆಸೆಯುತ್ತಲೇ, ಕೆಲ ಪೊಳ್ಳುಗಳನ್ನು ಧಿಕ್ಕರಿಸುವ ಯತ್ನ ಇಲ್ಲಿದೆ. ಪಟ್ಟನೆ ಬಂಡಾಯದ ದೃಷ್ಠಿಯ ಕವನ ಅನಿಸಿಬಿಡುವ ಅಪಾಯವನ್ನು ಪಕ್ವತೆಯ ಕಡೆ ತಿರುಗಿಸುವ ನಿಮ್ಮ ಯತ್ನ ಫಲಕಾರಿಯಾಗಿದೆ.

    ಕಾವ್ಯದ ಪಾಕವನ್ನು ಅರಿಯದ, ಗೀಚಿದ ನಾಲ್ಕು ಸಾಲನ್ನೇ ಮಹಾಕಾವ್ಯದ ಮಟ್ಟಕ್ಕೆ ಮಾರ್ಕೆಟಿಂಗ್ ಮಾಡಬಲ್ಲ ಇಂದಿನ ಕವಿ ಪುಂಗವರ ನಡುವೆ ತೀವ್ರವಾಗಿ ಬರೆಯಬಲ್ಲ ನಿಮ್ಮಂತವರು ಮಾತ್ರ ಪಠ್ಯವಾಗಿ ಉಳಿಯಬಲ್ಲರು.

    ReplyDelete
  2. ಈಶ್ವರ‍್ ಸರ‍್... ಇಂತ ಕವಿತೆ ಬೇಕು.... ಅಜ್ಜ ಇಲ್ಲದಿದ್ದರೂ ಇದ್ದಂತೆ. ಸಾಗಿ ಹೋದವರನ್ನು ಮತ್ತೆ ಎದುರಿಸುವ ಇಂತಹ ಕವಿತೆ ತುಂಬಾ ಎದೆಗೆ ಹತ್ತಿರವಾಗುತ್ತವೆ. ಈ ಕೆಳಗಿನ ಸಾಲುಗಳಂತೂ ತುಂಬಾ ಸುಂದರವಾಗಿದೆ.
    \\ಅಜ್ಜ ಕೊಯ್ಯಲೆ ಇಲ್ಲ
    ಮತ್ತೆ ಗದರಿದರೆನಗೆ
    ಇದು ಸಾಂಬಾರಿಗೂ ಅಲ್ಲ, ಪಲ್ಯಕ್ಕೂ ಅಲ್ಲ
    ಮುಂದಿನ ವರುಷದ ಬಿತ್ತನೆಗೆ ಮಗನೆ !

    ಹರಿವೆ ಬೀಜ ತೆಗೆದಿಟ್ಟರು
    ಅಜ್ಜ ರುಚಿ ನೋಡದೇ ಸತ್ತರು
    ಸನ್ಯಾಸಿಯಂತೆ,
    ಒಳ್ಳೆಯ ಬೀಜ , ಬಿತ್ತುವ ಹಾಗಿಲ್ಲ ಈಗ ! \\

    ReplyDelete
  3. ಕಿರಣ ಬಿತ್ತುವವರು ಕೆಲವೊಮ್ಮೆ ಫಲ ಅನುಭವಿಸದೇ ಹೋಗುತ್ತಾರೆ ಮುಂದಿನ ಪೀಳಿಗೆಗೆ. ಆದರೆ ಕಡೆಯ ಆಶಯ ಅಥವಾ ಆತಂಕ ನನಗೆ ಅರ್ಥ ಆಗಲಿಲ್ಲ...ಒಳ್ಳೆಉಅ ಬೀಜ ಬಿತ್ತುವ ಹಾಗಿಲ್ಲ?? ಏಕೆ.

    ReplyDelete