Tuesday, August 30, 2011

ಓ ಕವಿಯೇ..


ಓ ಕವಿಯೆ, ಪ್ರಕೃತಿ ಪ್ರೇಮಿಯೆ ನೋಡು
ನೀರಿಲ್ಲಿ ಹರಿಯುವುದೆ ಹಾಲಿನಂತೆ ?
ನಿಲ್ಲಿಸು ನಿನ್ನ ಅರಚಾಟ ಕಿರುಚಾಟ
ನೀರೆ ಇರದಿರೆ ಏಕೆ ಹಾಲ ಚಿಂತೆ ?

ನಿನ್ನ ಆಭಾಸಕ್ಕೆಲ್ಲ ಉತ್ತರಿಸುವುದ್ಯಾರು
ಹಾಲು ನೀ ಹುಡುಕು ನನಗೆ ಬೇಡವಿಲ್ಲಿ !
ಮುನಿದು ಮೈಯ್ಯನು ಮುಚ್ಚುವಾಟವು ಬೇಡ
ಎಳೆಯುವುದು ನಿನ್ನ ಕೈ ಸೆರಗನಿಲ್ಲಿ

ಮೂಕವದು ಭಾವಗಳು ಎಂದೆಲ್ಲ ಒದರದಿರು
ಭಕ್ತಿ ಪ್ರೀತಿಗಳೆಲ್ಲ ನಿನ್ನ ಒಳಗೆ !
ನಿನಗೆ ನೆಪ ಬೇಕೆಂದು ಬರೆವ ತೆವಲು ಇದಲ್ಲ
ಕಣ್ಣೀರು ಕರಗುವುದೆ ಜೇನಿನೊಳಗೆ ?

ಬತ್ತಲಲಿ ಕತ್ತಲಲಿ ಬರಿಯ ಬಟ್ಟಲಲೆಲ್ಲಾ
ನೀ ಬರೆವ ಘನತರದ ಕಾವ್ಯ ಕವನ !
ಇದರ ಮೇಲೊಂದಿಷ್ಟು ಕಸವೊ ಬೆಂಕಿಯೊ ಹಾಕಿ
ಮತ್ತೆ ತೋರುವುದೇನು ನಿನ್ನ ಜತನ ?

ಸಾಕು ಕವಿ , ನೀನೆ ಗುರು ! ದೈವ ನಮಗೆ
ಬರೆಯದಿದ್ದರು ಕೊಡಿಸು ಸ್ವಲ್ಪ ಬೆಲ್ಲ!
ಮತ್ತೆ ಕೊಪ್ಪರಿಗೆ ಚಿನ್ನ ನಾನು ಕೇಳುವುದಿಲ್ಲ
ಉತ್ತರಿಸು ಪ್ರಶ್ನೆಗಳ ಬರಿಯ ಕನಸು ಅಲ್ಲ !

೩೦-೦೮-೨೦೧೧

11 comments:

  1. ಅವಾಸ್ತವಿಕ, ಅಪ್ರಸ್ತುತ ಮತ್ತು ಸ್ವಯಂ ಬಹುಪರಾಕ್ ಕವಿಗಳಿಗಳಿಗೆಲ್ಲ ಸರಿಯಾದ ಛಡೀ ಏಟು ಕೊಟ್ಟಿದ್ದೀರಿ.

    ನವ್ಯದವರು ಕಹಿ ಗುಳಿಗೆ ತಿನಿಸಿದರೆ, ನವೋದಯದಯದವರು ಬೆಲ್ಲ ಮುಂದಿಟ್ಟು ತಿಂದುಕೊಳ್ಳಿ ಎಂದು ಹೇಳಿ ಎದ್ದು ಹೋದರು.

    ಸಕಾಲಿಕ ಕವನ, ಮನ ಮೆಚ್ಚಿಗೆಯಾಯಿತು.

    ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ.
    www.badari-poems.blogspot.com
    www.badari-notes.blogspot.com
    www.badaripoems.wordpress.com

    ReplyDelete
  2. ನಿಮ್ಮ ಮೆಚ್ಚುಗೆಗೆ ಧನ್ಯವಾದ ಪಲವಳ್ಳಿ ಸರ್. ನಿಮ್ಮ ಬ್ಲಾಗನ್ನು ಆಗಾಗ ಓದುತಿರುತ್ತೇನೆ.

    ReplyDelete
  3. 'ಕಣ್ಣೀರು ಕರಗುವುದೆ ಜೇನಿನೊಳಗೆ ?' ಸು೦ದರ ಉಪಮೆಯೊ೦ದಿಗೆ ಬಹಳ ಚೆನ್ನಾಗಿ ಕವನಿಸಿದ್ದೀರಿ. ಅಭಿನ೦ದನೆಗಳು.

    ReplyDelete
  4. ತುಂಬಾ ಧನ್ಯವಾದಗಳು ಮೇಡಂ. ಆಗಾಗ ಬರುತ್ತಿರಿ .

    ReplyDelete
  5. ಯಾವುದೇ ಡಿಗ್ರಿ- ಸರ್ಟಿಫಿಕೇಟುಗಳಿಲ್ಲ ಸಾಹಿತ್ಯದ ಬರವಣಿಗೆಗೆ.ಬರೆಯಬೇಕೆನ್ನುವ ಛಲದಲ್ಲಿ ಅಕ್ಷರಗಳನ್ನು ವ್ಯರ್ಥ ಮಾಡುವುದು ಅದರ ಕಾಯಕವಲ್ಲ. ವ್ಯತಿರಿಕ್ತ ಸಂದರ್ಭದಲ್ಲಿ ಅನುಭವಿಸುವ ಅನುಭಾವಗಳು, ಕೆಲವು ಸಾಹಿತ್ಯದ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳಲು ಹವಣಿಸುತ್ತವೆ. ಅದರಲ್ಲಿ ಕವಿತೆಯೂ ಒಂದು. ಅವನಿಗೆ ಕವಿ ಅಂತ ಹೇಳುತ್ತೇವೆ.ತಾನು ಬರೆದದ್ದು ಯಾರೂ ಗಮನಿಸುವುದಿಲ್ಲ ಅಂತ ಅವನಿಗೆ ಗೊತ್ತು. ಅದರೂ ಸಾವಿರ ಉಳಿ ಪೆಟ್ಟಿನ ಶಭ್ದಗಳಲ್ಲಿ ತನ್ನದೊಂದು ಶಬ್ಧ ಸಮಾಜಕ್ಕೆ ಕೇಳಬಹುದು ಅನ್ನುವ ಆಶಾಭಾವನೆಯಷ್ಟೆ ಅವನನ್ನು ಸಮಾಜದಲ್ಲಿ ಬರಹಗಾರನನ್ನಾಗಿ ನಿಲ್ಲಿಸಿ ಬಿಡುತ್ತದೆ. ಈ ರೋಗಗ್ರಸ್ತ ಸಮಾಜಕ್ಕೆ ಔಷಧಿ ಕೊಡುವ ತಾಕತ್ತು ತನ್ನಲ್ಲಿಲ್ಲ ಅಂತ ಅವನಿಗೆ ಗೊತ್ತು. ಆದರೂ ಬರೆವಣಿಗೆಯನ್ನು ಓರ್ವ ವಸ್ತುನಿಷ್ಠ ಬರಹಗಾರ ನಿಲ್ಲಿಸುವುದಿಲ್ಲ.ನಿಮ್ಮ ಕವಿತೆ ಆಶಯಕ್ಕೆ ನನ್ನ ಮಾತಿದು.

    ReplyDelete
  6. ಕವನದ ಆಶಯದಲ್ಲಿ ಇದೂ ಒಂದಾದ್ದರಿಂದ ನೀವು ಹೇಳಿದ್ದಕ್ಕೆ ಒಪ್ಪಿಕೊಳ್ಳುತ್ತೇನೆ. ಧನ್ಯವಾದಗಳು ನಿಮ್ಮ ಸಮಯಕ್ಕೆ ರವಿ ಸರ್.

    ReplyDelete
  7. ಈಷ್ವರ್;ಚೆಂದದ ಕವನ.ನೀವು ಬರೆಯುವ ಶೈಲಿ ಇಷ್ಟವಾಯಿತು.

    ReplyDelete
  8. ಹಾಯ್ ಸರ್ ನಿಮ್ಮ ಕವನ ತು೦ಬ ಚನ್ನಾಗಿದೆ. ಜತನ ಇದರ ಅಥ೯ವೇನು ನನಗೆ ಗೊತ್ತಿಲ್ಲ ತಿಳಿದುಕೊಳ್ಳಬೇಕೆ೦ದಿರುವೆ ದಯವಿಟ್ಟು ತಿಳಿಸಿ

    ReplyDelete
  9. ಸತೀಶ್ ಬಸವರಾಜು ಕಲ್ಲಹಳ್ಳಿ.September 9, 2011 at 1:13 AM

    ಹಾಯ್ ಸರ್ ನಿಮ್ಮ ಕವನ ತು೦ಬ ಚನ್ನಾಗಿದೆ. ಜತನ ಇದರ ಅಥ೯ವೇನು ನನಗೆ ಗೊತ್ತಿಲ್ಲ ತಿಳಿದುಕೊಳ್ಳಬೇಕೆ೦ದಿರುವೆ ದಯವಿಟ್ಟು ತಿಳಿಸಿ

    ReplyDelete
  10. ಚೆನ್ನಾಗಿದೆ... ಇಷ್ಟು ಹೇಳಿದರೆ ಸಾಕಾಗುವುದುಲ್ಲವೇನೋ...! ಹುಟ್ಟಾದಾರಭ್ಯ ಸಾಯುವವರೆಗೂ ಈ ಪ್ರಕೃತಿಯ ಮಡಿಲಲ್ಲೇ ಇದ್ದರೂ, ಇದನ್ನ ಅರ್ಥ ಮಾಡಿ ಕೊಳ್ಳುವುದು ಕೆಲವೇ ಕೆಲವು ಜನ... ಇದನ್ನ ಅನುಭವಿಸುವವರೂ ಸಹ! ಪ್ರಕೃತಿಯೋಡನೆ ಈ ಮಧುರ ಸಂಭಾಷಣೆ ಚೆನ್ನಾಗಿ ಮೂಡಿ ಬಂದಿದೆ..!! ನಿಮ್ಮ ಪ್ರಶ್ನೆಗಳಿಗೆ.. ಪ್ರಕೃತಿ ತನ್ನ ಭಾಷೆಯಲ್ಲಿಯೇ ಉತ್ತರಿಸಿಯೂ ಇರಬಹುದು.... ಅದನ್ನ ಆಲಿಸಿ.. ಮತ್ತೋಂದು ಕವಿತೆ ಯಾಕೆ ಬರಬಾರದು???

    ReplyDelete