Tuesday, August 27, 2013

ಅಷ್ಟಮೀ ಗೀತ!

ಅತ್ತಿಮರದಿಣುಕಿನಲಿ ಕಾಣುವನು ಶ್ರೀಕೃಷ್ಣ
ಅವನ ಶಲ್ಯದ ಜೊತೆಗೆ ಅವಳ ಗೆಜ್ಜೆ!
ಹಿಡಿಯಹೋದೆಯ ಸಖಿಯೆ ಅವನಂತ ನಲ್ಲನ
ಹುಡುಕಲಾರಿರಿ ನೀವು ಮೀನ ಹೆಜ್ಜೆ.
~
ಕೊಳಲ ಬಿಡು ಕನ್ನಿಕೆಯೆ, ಕೃಷ್ಣ ಹೋಗಲಿ ಸಾಗಿ
ಅವನಿಗೇನವಸರವು ತಿಳಿಯುತಿಹುದು!
ಅವನ ಪ್ರೀತಿಯ ಸಖಿಯು ಕಾಯುತ್ತಲಿಹಳಲ್ಲಿ
ರಾಧೆಗೂ ಈಗೀಗ ಜಂಭ ಹೌದು.
~
ನನ್ನರಸ ಏನಾಯ್ತು? ಯಾರೋ ಚಿವುಟಿಹರಲ್ಲ
ಈ ಊರ ಹುಡುಗಿಯರಿಗೆಷ್ಟು ಸೊಕ್ಕು?
ನಿನ್ನ ಕೆನ್ನೆಯ ಕೆಂಪು ಎಂತ ಸೋಜಿಗ ಚೆಲುವ
ನಾನಿನ್ನ ರಾಧೆ, ನೀ ನನ್ನ ಹಕ್ಕು.
~
ನಂದಗೋಕುಲದೊಳಗೆ ಮುರಳಿಲೋಲನ ಕರೆದು
ನಂದಭೂಪನ ಮಡದಿ ಮುದ್ದಿಸಿದಳು;
ಓರೆನೋಟದ ಹುಡುಗಿ ಹಾಳುಮಾಡಿದಳಲ್ಲ
ನನ್ನ ಕಂದನ ತುಟಿಯ ರಂಗುಗಳನು!
~
ಸಖಿಯು ಸಿಂಗರಿಸಿಹಳು ನಿನ್ನ ಮನೆಯಂಗಳವ
ಓ ರಾಧೆ ನಿನಗಿಂದು ಹಬ್ಬವೇನೆ?
ಗೋಪಾಲ ಬಂದಿಹನು ಹುಟ್ಟುಹಬ್ಬದ ನೆವದಿ
ಅವನ ಮನಸಲಿ ನಿಂತ ನೀರೆ ನೀನೆ!
~
~
ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು..

5 comments:

  1. ಹಾಥಿ ಗೋಡಾ ಪಾಲಕಿ
    ಜೈ ಕನಯ್ಯ ಲಾಲ್ ಕಿ

    ನಿಮಗೂ ಅಷ್ಟಮಿಯ ಶುಭಾಶಯಗಳು .... ಕವನ ಚೆನ್ನಾಗಿದೆ ಸರ್ ...

    ReplyDelete
  2. ಕೃಷ್ಣಗೋಪನ ಜನ್ಮ ಶುಭದಿನದ ಸಮಯದಲಿ
    ಅವನಿಗೊ ಶುಭವ ಕೋರಲೇ ಬೇಕು.
    ಅವನ ಜೊತೆಗೆ ರಾಧೆ, ಗೋಪಿಯರಿಗು ಮತ್ತೆ
    ಗೀತೆ ಬರೆದವರಿಗೂ ಶುಭವ ಹೇಳಬೇಕು!

    ReplyDelete