Saturday, January 28, 2012

ಏನೆಂದು ಹೇಳಲಿ ಗೆಳೆಯಾ, ಅವಳ ಒಲವನು ?


ಏನೆಂದು ಹೇಳಲಿ ಗೆಳೆಯಾ, ಅವಳ ಒಲವನು ?
ಮಾಗಿಯಲ್ಲು ಬೆವರುತಲಿರುವೆ ನೆನೆದು ಅವಳನು!

ಏಕಾಂತ ಸೊರಗಿದೆ ಗೆಳೆಯಾ, ಅವಳು ಇರುವೆಡೆ
ಬಾನಿನಿಂದ ಚಂದ್ರನಿಳಿದಾ ಸಿರಿಯ ಮೊಗದೆಡೆ

ಮುತ್ತಿಡುವಾಗೊಮ್ಮೆ ಅವಳ ತುಂಟ ಕಂಗಳು
ಮತ್ತೇನನೋ ಬಯಸುತಿರುವ ಗೀಚು ಕೈಗಳು

ಸೊಬಗಿನಲೆ ಚಿಮ್ಮಿಸುವ ಈ ಪ್ರೇಮ ನಂಬುಗೆ
ಅವಳೆ ಈಗ ನಾನಾಗಿಹೆನು  ನನ್ನ ಹೆಮ್ಮೆಗೆ !

ಕಾರಿರುಳಲೆ ಮೀರಿ ಬರುವ ಅವಳ ನೆನಪನು
ಹೇಗೆ ನಿನಗೆ ಹೇಳುವೆನೋ ನಾನು ಅರಿಯೆನು

Monday, January 23, 2012

ಹೆಣ್ಣು-ಮಣ್ಣು


ದಿಕ್ಕು ತಪ್ಪಿಸುವ
...ಕಡೆಗೊಮ್ಮೆ ಗಮನ ಸುಳಿವ ಹೆಣ್ಣು.
ತಪ್ಪಿದ್ದೇ ಗುರಿ, ಎಚ್ಚರದ ಚಲನೆಯ ಕಣ್ಣು.

ಮುಗಿಬಿತ್ತು ದೃಷ್ಟಿ, ಅನಾಮತ್ತಾಗಿ
ತೊಡೆಯ ಮೇಲಿರಿಸಿಕೊಂಡಳು,
ಇನ್ನೂ ಹೀರಬಹುದೇ ?
ಮಧುವಿನಮಲು ಹೆಚ್ಚಾಗಿ
ಅವಳನ್ನು ಮುದುಕಿ ಎಂದೆನೇ?

ಅದೆಂತದೋ ಸುಳ್ಳು ಸಂಸಾರ !
ತುಟಿಗೆ ತುಟಿಯಂತೆ ,ಹೆಗಲಿಗೆ ಹೆಗಲಂತೆ
ನೆತ್ತರ ಹೀರುವ ಅವಕಾಶ ಕೊಡಲಿಲ್ಲವದು
....ಕಕ್ಕುವುದನ್ನೂ.

ಬಾಳೆಯ ವ್ಯವಹಾರ ಸ್ವಾಮಿ!
ಸತ್ತು ಹುಟ್ತುವುದು ನನ್ನ ಪರಿ,
ಎಲ್ಲ ಹುಟ್ಟಿದ ಹಿಳ್ಳೆಗಳನ್ನು ಅವಳು ಪೊರೆಯುತ್ತಾಳೆ
ಆಳಕ್ಕೆ ಬೇರೂಡದೆಯೆ,
ಮತ್ತೆ ಕಾಡುತ್ತಾಳೆ ಗಮನ

ವಿರಾಮದ ಕಾಲಕ್ಕೊಮ್ಮೆ
ಹೆರಳು, ಇಷ್ಟಗಲ ಬಿಂದಿ, ಮೂಗಿನ ನತ್ತು
ನೆನಪಾಗುವುದುಂಟು,
ಕೂಡೆ ಕನಿಕರಿಸಿದ ಕಣ್ಣುಗಳನ್ನೂ!
ಚಿತ್ತಕ್ಕೆ ನಿಲುಕದ ಅವಳ
ಪದ್ಮಪತ್ರದ ಭಂಗಿ,
ಅಲ್ಲೆಲ್ಲೋ ನನ್ನದೇ ಹೊಳೆವ ಬೆವರು !

೨೪-೦೧-೨೦೧೨

Tuesday, January 17, 2012

ಕೊಳಲು-ಗೋಕುಲದ ಬಿಳಲು


ಎತ್ತ ಪೋದನೋ ಮಾಧವ
ಎತ್ತ ಪೋದನೋ
ಮತ್ತ ರಾಧೆ ಕಾಯುತಿಹಳು
ಚಿತ್ತದಲ್ಲಿ ಅವನ ನೆನೆದು..

ಮಾಧವನ ಕೈಯ್ಯ ಬೆರಳು
ಮೋದದಿಂದ ನುಡಿಸಿ ಬರುವ
ನಾದವನ್ನು ಕೇಳದೆಯೇ
ರಾಧೆ ಎತ್ತ ಪೋದಳು ?
೨.
ಗೆಜ್ಜೆ ಪಾದ ಘಲ್ಲೆನು,ಮೆಲು
ಹೆಜ್ಜೆಗಳನು ಇಡುತ ಬಂದ
ಮಜ್ಜಿಗೆಯಾ ಬೆಣ್ಣೆ ಮುಖದಿ
ಲಜ್ಜೆ ಏಕಿದೆ..ರಾಧೆ ಲಜ್ಜೆ ಏಕಿದೆ ?

ಚಂದಿರನ ನೋಡೆ ರಾಧೆ
ಮಂದ ಹರಿವ ಯಮುನೆ ನೋಡೆ
ಇಂದು ಎಂತ ಮಾಧುರ್ಯವೊ
ಒಂದು ತಿಳಿಯೆ ನಾನು !

ತಡೆ ರಾಧೆ ಕೇಳುತಿಹುದೆ?
ಬಿಡದೆ ಮಥುರೆ ಕರೆಯುತಿಹುದ
ಬೆಡಗಿನೊಲವೆ ನಿನ್ನ ತೊರೆದು
ಅಡಗಬೇಕು ನಾಳೆ ನಾನು

ನಾನು ನೀಲ ನೀನು ಲೀನ
ನ್ಯೂನವಿರದ ಪ್ರೇಮಗಾನ
ಬಾನ ತುಂಬ ನಗುವ ತಾರೆ
ಪಾನವಾಯ್ತು ಭುವಿಯ ಜೇನು
ಗಾನವಾಯ್ತು ಮೌನ ಸೊಲ್ಲು
ದೀನ ಬಿಂಬ ತೊರೆಯೆ ನೀರೆ,,

೩.
ಕೊಳಲ ಬಿಟ್ಟೆ ಯಮುನೆಯಲ್ಲೆ
ಅಳಲದಿರುವ ಭರವಸೆಯಲಿ
ಬಲರಾಮನ ಜೊತೆಗೆ ನಾನು
ಗೆಲಲು ಪೋಪೆನು , ಮಥುರೆಗೆ !
ಸುಳಿಯಾದಳೆ ಯಮುನೆ ?

೧೭-೦೧-೨೦೧೨

ಹಿನ್ನಲೆ :-

ಉದ್ದೇಶವಿಲ್ಲದ ಸಾಹಿತ್ಯ ಇಲ್ಲ. ಪುತಿನ ಅವರ ಗೋಕುಲ ನಿರ್ಗಮನ ನಾಟಕದಿಂದ ತುಂಬಾ ಪ್ರಭಾವಿತ ನಾನು. ಮಥುರೆಗೆ ತೆರಳಿದ ಕೃಷ್ಣ ಮತ್ತೆ ಬರಲಿಲ್ಲ ಗೋಕುಲಕ್ಕೆ, ರಾಧೆಯನ್ನವ ನೋಡಲಿಲ್ಲ. ಅದಕ್ಕೆ ಯಮುನೆಯಲ್ಲಿ ಬಿಟ್ಟ ಕೊಳಲನ್ನು ಸುಳಿಯು ಮಾಯಮಾಡಿತೇನೋ ?
ಗೆಲಲು ಪೋದ ಕೃಷ್ಣ ಮರಳಿ ಬರಲಿಲ್ಲ...

ಮತ್ತೆ ಈ ರಚನೆಗೆ ಪೂರಕವಾದದ್ದು ನನ್ನ ತಂಗಿ ಪೂಜಳ ಫೋಟೋ ಮತ್ತೆ ಸುನಿತಕ್ಕ. ಅವರಿಗೆ ಧನ್ಯ.

Monday, January 16, 2012

ಕೌರವನ ಸ್ವಗತ !

ಅಲ್ಲಿ ತೊಡೆಮುರಿದು ಬಿದ್ದ ಮೇಲೆ,
ಅಜ್ಜಾ ಭೀಷ್ಮ , ಜಲಸ್ಥಂಬನ ವಿದ್ಯೆ ಬೇಡವಿತ್ತು
ಮರಗಟ್ಟುವ ವಿದ್ಯೆ ಇರಲಿಲ್ಲವೇ ನಿನ್ನ ಬಳಿ ?

ಎಲ್ಲಿದೆ ಈಗ ಕಾಲನ ಕನ್ನಡಿ ?
ನೋಡಬೇಕಿತ್ತೊಮ್ಮೆ ಅದನು,
ಪ್ರಾಯಶ್ಚಿತ್ತದ ಗೆರೆಯಿದೆಯೆ ಹಣೆಯಲ್ಲಿ?
ತೊಡೆಯೇರು ಎಂದಿದ್ದೆ ದ್ರುಪದೆಗೆ
ಕುಸಿದಿತ್ತೆ ಧಾತು ?

ಭೀಮನ ಗದೆ ದೊಡ್ಡದೇನೂ ಅಲ್ಲ,
ಒಮ್ಮೆಗೇ ಗದೆಗೆ ಗದೆ ಸೇರಿ
ಠಣ್ ಎಂದಾಗಲೇ ಅರಿವಾಗಿತ್ತು ನನಗೆ,
ಪರಾಕ್ರಮದ ನನ್ನ ಕೈ ಜಡ್ಡುಗಟ್ಟಿ
ನೀರಿನ ಕ್ರಿಮಿಗಳ ನೆನೆಯುತ್ತಿತ್ತು !

ಇಲ್ಲ, ಸಾಯುವುದಿಲ್ಲ
ಇನ್ನೊಮ್ಮೆ ಸೂರ್ಯನ ಮುಖ ನೋಡಬೇಕು,
ಮೇಲೆ ಕ್ಯಾಕರಿಸಿ ಉಗಿದ ಎಂಜಲು
ಮೇಲಿಂದ ಸೀರ್ಪನಿದಾಗ
ಕಾಮನಬಿಲ್ಲನ್ನೊಮ್ಮೆ ಕಾಣಬೇಕು.

೧೬-೦೧-೨೦೧೨

ಕೌರವ - ಯಕ್ಷಗಾನ ಪಾತ್ರಧಾರಿ , ಕೆ ಗೋವಿಂದ ಭಟ್
ಫೋಟೊ - ದಿಗ್ವಾಸ್ ಹೆಗಡೆ

Sunday, January 8, 2012

ಹೀಗೊಂದು ಸ್ವಗತ :-


೧. 
ಅಪ್ಪ ನೆಟ್ಟಾಲದ ಮರವ ಹುಡುಕುತ್ತಿದ್ದೆ
ಕೊನೆಗೆ ಟ್ರಂಕಿನ ಮೂಲೆಯಲ್ಲಿದ್ದ 
ಹತ್ತುಪೈಸೆಯ ನಾಣ್ಯ ಸಿಕ್ಕಿತು.


೨.
ಅಮ್ಮನ ಮಡಿಲಮೇಲೊರಗುವುದು ಖುಷಿ,
ಹರಳೆಣ್ಣೆ ನೀಗುವುದೇ ಕಾಲ ನೋವ ?


೩.
ಮಳೆಹನಿ ಸೋಕದೆ ಬಿತ್ತಕ್ಕೆ ಹುಟ್ಟಿಲ್ಲವೇ ?
ಇದೆ,
ಅವಳ ಕಣ್ಣೀರು ಬಿದ್ದಾಗ ಹೀಗೊಂದು ಹುಟ್ಟು !