Saturday, June 22, 2013

ಉದ್ದಾರದವರು

ಉದ್ಧಾರದವತಾರಿ ತೋರಿದನು ಮೈಯ್ಯನ್ನು
ಇದು ವಸ್ತ್ರ, ಇದು ದಾರ, ಇಲ್ಲಿಲ್ಲ ದಾರಿ;
ಪರಂಪರೆಯೆ ಚರ್ಮ ಕಳೆದುಕೊಂಡೆಯ ಮಗನೆ?
ಹೊಲಿವುದಿದು ಕಷ್ಟ; ವಕ್ರ ಸೂಜಿ.

ಗುದ್ದಿದರೆ ಚಿಮ್ಮುವುದು ಹೊಸತನದ ನೆತ್ತರು
ಆಗೊಮ್ಮೆ ಬಿಸಿಬಿಸಿಯು; ಹೆಪ್ಪುಗಟ್ಟುವುದು
ಕೆಂಪು ಕಪ್ಪಾಗಿ ನರವ ಸೆಳೆತಕೆ ದೂಡಿ
ಮತ್ತೆ ಬಿಸಿಯಾಗಿಸುವ ತೆವಲು ಯುದ್ಧ

ಶಾಂತಿ! ಶಾಂತಿ!!; ಊದಿದವ ಮಲಗಿದನು
ಎದ್ದವನೆ ಪರಚಿದನು ಬೆವರ ಕೊಳೆಯ
ಅವತಾರಿ ಬಂದನಿದೋ, ಸರಿದು ಪಕ್ಕಕೆ ನಿಂತು
ಸಾಬೂನು ಶಾಂಪುಗಳ ಕೊಟ್ಟು ಬನ್ನಿ.

ನಿರೀಕ್ಷೆಗಳ ತಿರುವುಗಳು ಹಣೆಯಲ್ಲಿ ನೆರಿಗೆಗಳ
ಮೂಡಿಸುತ ತಂತಾನೆ ನೆವನದೊಳಗೆ
ಎದ್ದು ಗುಡಿಸಿದ ಬಯಲು ಅಂಗಳ ಕೂಡ
ಶುದ್ಧವಾಗಿಯೆ ಕಂಡು; ಎಲೆಯ ರಾಶಿ

ಸರಿ ತಪ್ಪುಗಳ ಕುಣಿಕೆಗಳ ಕುಣಿತಕ್ಕೆ
ಇರುಳೆಷ್ಟೊ ಹಗಲೆಷ್ಟೊ ಒದ್ದಾಡಿದೆ
ಉದ್ಧಾರಿಗೂ ಹಾಗೆ ತಪ್ಪು ಇರುಳಿನ ಕೊಡುಗೆ
ಬೆಳಗು ಆಶೆಯ ತೆರದಿ ಕಾಲ್ ಹಿಡಿದಿದೆ.

ರೇಶಿಮೆಯ ದಾರಗಳು ಅಪ್ಪಿ ಕಾವಿಯ ಪಂಚೆ
ತುಪ್ಪಗಳು ಒದಗೀತು ಹೋಮಕೆ
ಸುಸ್ತಾದ ಮೇಲ್ ಮತ್ತೆ ನಿಷ್ಕಾಮ ವಿಪರೀತ
ದೇವ ಮಲಗಿದ ತಾನು ವೇದದುಘ್ಗೋಷಕೆ

ಊರುಗೋಲಲಿ ಕೂಡ ಮಣ್ಣು ಚುಚ್ಚಿದ ಗುರುತು
ಧೂಳಿಯಲಿ ಬರೆಯುತಿರಲೆನ್ನ ಹೆಸರು,
ಎಂದೆನುವ ವೇಳೆಯಲೆ ಅಸ್ತಮದ ಆಲಾಪ
ನಿಂತು ಮರಳಿತೆ ಮತ್ತೆ ಹೊರಳಿನುಸಿರು.

ಇದು ಸರಿಯು;ಗುರಿಗೆ ಉರವೇ ಬೇಕು
ಹೊಡೆಯೆ ಮೇಲೇರಿದರೆ ನಾಭಿ ಚೂರು!
ಇಳಿದರೂ ಹಾರುವುದು ಕೊರಳು ಪಟ್ಟಿಯ ಜೊತೆಗೆ

ನಿನ್ನ ಎದೆಯಲಿ ಮರೆತ ಹೆಸರು ನೂರು.

2 comments:

sunaath said...

ವೈಚಾರಿಕ ಕವನವನ್ನು ಕೂಡ ಭಾವಪೂರ್ಣವಾಗಿ ಹೆಣೆಯುವುದು ನಿಮ್ಮ ವೈಶಿಷ್ಟ್ಯವಾಗಿದೆ!

kavinagaraj said...

ಓರ್ವ ಜಿಜ್ಞಾಸುವನ್ನಿಲ್ಲಿ ಕಂಡೆ!! ಧನ್ಯವಾದಗಳು.