Tuesday, April 9, 2013

ಸಂಧ್ಯಾಸಮಯ


"ಸಂಜೆಯೇರುತ್ತಲೇ ನೆರಳು ಭೀಕರಗೊಂಡು
ನನ್ನ ನಾಳೆಯ ನನಗೆ ಹೇಳುತಿಹುದೇ?
ಸಾಮರ್ಥ್ಯಕ್ಕಿಂತಲೂ ತೋರುವುದು ಬೇರೊಂದು
ಸತ್ಯವನು ಹೇಳುವುದು ಸಂಧ್ಯೆ ತಾನೆ?

ಬೆನ್ನ ಹಿಂದಿನ ಸೂರ್ಯ ಬೆರಗು ಕಾಣುತ ಸುಳಿದು
ಭ್ರಮೆಯ ತಲೆಗೇರಿಸುತೆ ನಡೆದ; ಮುಗಿದ
ಇಳಿಯಿತದೋ ನಿಶೆಯಮಲು; ಮಂಕು ಕಮರಿತು ಧರೆಗೆ
ಕತ್ತಲೆಯಲಿ ಮಿನುಗುಹುಳು ಮಿಂಚುಕುಡಿದ.

ಇದು ಬೆಟ್ಟ ಇದು ಗುಡ್ಡ ಇದು ಮರದ ತಾಯ್ಬೇರು
ಇದು ಪರಮಪವಿತ್ರನದಿ ಎಂಬುದಿಲ್ಲ;
ಕಪ್ಪಡರಿ ಮೊರೆವಾಗ ಎಲ್ಲವೂ ಮಸಿಯಂತೆ
ಸತ್ಯ ಬತ್ತಲೆಯಂತೆ; ಕಾಣ್ಕೆಗಲ್ಲ.

ನಿಜದ ಸೂರ್ಯನು ನಾಳೆ ಹುಟ್ಟುವಾಶೆಯು ಸತ್ತು
ಕಪ್ಪು ಕತ್ತಲೆಯಲ್ಲಿ ಹುಡುಕುತಿಹೆನು;
ಸಂಜೆ ಭ್ರಾಂತಿಯ ಚಿತೆಗೆ ಇನ್ನಷ್ಟು ಸುಳ್ಳುಗಳ
ರಾತ್ರಿ ಚಂದಿರ ತಂದು ತುಂಬುತಿಹನು.

2 comments:

sunaath said...

ನಿರಾಸೆಯೂ ಸಹ ಕವನದಲ್ಲಿ ಚೆಂದವಾಗಿಯೇ ಕಾಣುವುದು!

ಮನಸು said...

tuMbaa chennaagide kavana..